ಬೆಂಗಳೂರು: ಕರೋನಾ ಸಂಕಷ್ಟಕ್ಕೆ ಒಳಗಾದವರ ಸಲುವಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ 1,610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಸಣ್ಣ, ಅತಿಸಣ್ಣ ಮಧ್ಯಮ ಕೈಗಾರಿಕೆಗಳ ಎರಡು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಉಳಿದ ಗ್ರಾಹಕರು ಎಲ್ಲ ಮೊತ್ತವನ್ನ ಒಮ್ಮೆ ಕಟ್ಟಿದ್ರೆ ಶೇಕಡ 1ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ರೈತರು ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿರುವ ಅಗಸರು, ಕ್ಷೌರಿಕರು ಆದಾಯ ಕಳೆದುಕೊಂಡಿದ್ದಾರೆ. ಹೀಗಾಗಿ 60 ಸಾವಿರ ಅಗಸರು, 2,30,000 ಕ್ಷೌರಿಕರಿಗೆ ಒಂದು ಬಾರಿ 5 ಸಾವಿರ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇನ್ನು ರಾಜ್ಯದಲ್ಲಿರುವ 7, 75 ಸಾವಿರ ಆಟೋ, ಟ್ಯಾಕ್ಸಿ ಚಾಲಕರಿಗೂ 5 ಸಾವಿರ ರೂಪಾಯಿ ನೀಡಲಾಗ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ನೇಕಾರರ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿರುವ 54 ಸಾವಿರ ಕೈಮಗ್ಗ ನೇಕಾರರಿಗೆ 2 ಸಾವಿರ ರೂಪಾಯಿ ಪ್ರತಿ ವರ್ಷ ನೀಡಲಾಗುವುದು. ಹೂ ಬೆಳೆಗಾರರಿಗೆ 1 ಹೆಕ್ಟೇರಿಗೆ 25 ಸಾವಿರ ಪರಿಹಾರ ನೀಡಲಾಗುವುದು. ತರಕಾರಿ, ಹಣ್ಣು ಬೆಳೆಗಾರರಿಗೆ ಪರಿಹಾರದ ಒಂದು ಪ್ಯಾಕೇಜ್ ಘೋಷಿಸಲಾಗುವುದು. ಕಟ್ಟಡ ಕೂಲಿ ಕಾರ್ಮಿಕರು ವಲಸೆ ಹೋಗುವದನ್ನ ತಡೆಯಲು 2 ಸಾವಿರದ ಜೊತೆಗೆ ಇನ್ನು 3 ಸಾವಿರ ರೂಪಾಯಿ ನೀಡಲಾಗುವುದು ಎಂದಿದ್ದಾರೆ.