ಸಿಂದಗಿ: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ, ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಟುಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಮೂಲಕ, ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ಮಾಡಲಾಯ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್ ನಾಗನೂರು ಮಾತ್ನಾಡಿ, ದೇಶದ ಕಾನೂನನ್ನ ಎಲ್ಲರು ಗೌರವಿಸಬೇಕು. ಇದರ ಜೊತೆಗೆ ಅದನ್ನ ಪಾಲನೆ ಮಾಡಬೇಕು ಅಂತಾ ಹೇಳಿದ್ರು. ವಿದ್ಯಾರ್ಥಿ ದಿನಗಳಿಂದಲೇ ಸಾಮಾನ್ಯ ಕಾನೂನು ಮತ್ತು ಪಾಲನೆ ಕುರಿತು ಮಾಹಿತಿ ಪಡೆಯಲಿ ಅನ್ನೋ ಒಳ್ಳೆಯ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಅಂತಾ ತಿಳಿಸಿದ್ರು.
ಪಿಎಸ್ಐ ಐ.ಎಂ ದುಂಡಸಿ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಕೆಡೆಟ್ ನ ಕವಾಯತು ಬೋಧಕ ಆರಕ್ಷಕ ಗಣೇಶ ಕೋಟೆ ಮಾತ್ನಾಡಿ, 8, 9ನೇ ತರಗತಿ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ತಲಾ 9 ಶಾಲೆಗಳಲ್ಲಿ ಎಸ್ ಪಿಸಿ ಅನುಷ್ಠಾನಗೊಳಿಸಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಅಂತಾ ಹೇಳಿದ್ರು.
ಐಆರ್ ಬಿ ಬಟಾಲಿಯನ್ ವಿಜಯಪುರದ ಆರ್ ಎಸ್ಐ ವಿಜಯ ಠಕ್ಕಣ್ಣವರ, ಪ್ರಾಚಾರ್ಯ ಯು.ಬಿ ಧರಿಕಾರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತ್ನಾಡಿದ್ರು. ಎಸ್ ಡಿಎಂಸಿ ಅಧ್ಯಕ್ಷ ಎಸ್.ಸಿ ಕುಂಬಾರ, ಸದಸ್ಯೆ ರೇಣುಕಾ ಮೇಲಿನಮನಿ, ಪಾಲಕ ಪ್ರತಿನಿಧಿ ಫಾತಿಮಾ ದಫೇದಾರ, ಪ್ರಥಮ ದರ್ಜೆ ಸಹಾಯಕಿ ಸವಿತಾ ಕರ್ಜಗಿ, ದೈಹಿಕ ಶಿಕ್ಷಕ ಸಿ.ಎಂ ಪಾಟೀಲ, ಎ.ಬಿ ಉಪ್ಪಾರ, ಆರ್.ಜೆ ಪವಾರ, ಅರುಣಕುಮಾರ, ರೇಣುಕಾ ಲೋಣಿ ಸೇರಿದಂತೆ ಅನೇಕರು ಭಾಗವಹಿಸಿದ್ರು.