ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ವಚನವೇ ಬಸವನ ಸಿದ್ಧಾಂತವಾಗಿದೆ. ವಚನವೇ ಮೂಲಧರ್ಮ. ಇದುವೇ ಎಲ್ಲ ಸಾಹಿತ್ಯದ ಮೂಲ ಎಂದು ದೇವರಹಿಪ್ಪರಗಿಯ ಗದ್ದಿಗೆಮಠದ ಮ.ನಿ.ಪ್ರ ಮಡಿವಾಳೇಶ್ವರ ಮಹಾಸ್ವಾಮಿಜಿ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಹಯೋಗದಲ್ಲಿ ಲಿಂಗೈಕ್ಯ ಶರಣಪ್ಪ ಸೊನ್ನದ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಶರಣರ ವಚನಗಳು ಎಂದಿಗೂ ಪ್ರಸ್ತುತ. ವಚನಗಳನ್ನು ಪಾಲಿಸಿದವನೆ ಮಹಾಂತ ಎಂದರು.
ಸಿಂದಗಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಪ್ಪ ಕತ್ತಿ, ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಕುರಿತು ಉಪನ್ಯಾಸ ನೀಡಿದರು. ಆಯ್ದಕ್ಕಿ ಮಾರಮ್ಮ ದಂಪತಿ ತಮ್ಮ ಕಾಯಕದಲ್ಲಿ ಎಷ್ಟೊಂದು ನಿಷ್ಠೆ ಹೊಂದಿದ್ದರು. ಪ್ರಸಾದ ಹಾಗೂ ದಾಸೋಹವನ್ನು ಯಾವ ರೀತಿ ನಡೆಸಿಕೊಂಡು ಹೋಗುವ ಮೂಲಕ ಇಂದಿಗೂ ಚಿರಸ್ಥಾಯಿ ಆಗಿದ್ದಾರೆ ಅನ್ನೋದರ ಕುರಿತು ಮಾತನಾಡಿದರು.
ಪತ್ರಕರ್ತ ನಾಗೇಶ ತಳವಾರ, ಜಾತಿ ವ್ಯವಸ್ಥೆಗೆ ಶರಣರು ಹೇಗೆ ಸವಾಲಾಗಿದ್ದಾರೆ ಅನ್ನೋದರ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರಗೌಡ ಪಾಟೀಲ, ಅತಿಥಿಗಳಾದ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗದ ರಾಜ್ಯ ಸಂಘಟನಾ ಸಂಚಾಲಕ ರಾವುತ ತಳಕೇರಿ ಮಾತನಾಡಿದರು.
ಈ ವೇಳೆ ದತ್ತಿ ದಾಸೋಹಿಗಳಾದ ಸಂಗಣ್ಣಮಾಸ್ತಾರ ಸೊನ್ನದ(ಹಂಚಲಿ), ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎ.ಎಚ್.ವಾಲಿಕಾರ, ರಾಜ್ಯ ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಜಿ ಯಂಕಂಚಿ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಕೆ ಪಾಟೀಲ, ತಾವರಖೇಡ, ಎನ್.ಬಿ ಪಾಟೀಲ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ದೇವರಹಿಪ್ಪರಗಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್ ಬಸವರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.