ಪ್ರಜಾಸ್ತ್ರ ಸುದ್ದಿ
ಸಿಂದಗಿ: ಹಾಳೂರಿಗೆ ಉಳಿದವನೆ ಗೌಡ ಅನ್ನೋ ಆಡು ಮಾತಿನಂತಾಗಿದೆ ಸಿಂದಗಿ ಪರಿಸ್ಥಿತಿ. ಶಾಸಕರಿಲ್ಲದ ಸಿಂದಗಿಯಲ್ಲಿ ಜನರ ಜೊತೆಗೆ ಪ್ರಾಣಿಗಳಿಗೂ ಗೋಳು ತಪ್ಪಿಲ್ಲ. ಒಳಚರಂಡಿ ನಿರ್ಮಾಣ ಸಂಬಂಧ ಪಟ್ಟಣದ ತುಂಬಾ ಗುಂಡಿಗಳನ್ನು ತಗೆಯಲಾಗುತ್ತಿದೆ. ಆದರೆ, ಗುಂಡಿಯ ಸುತ್ತ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಕೆಲಸವಾಗುತ್ತಿಲ್ಲ. ಹೀಗಾಗಿ ಮೂಕ ಪ್ರಾಣಿಗಳು ಅದರಲ್ಲಿ ಬೀಳುತ್ತಿವೆ.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿಯ ಗುಂಡಿಯೊಂದರಲ್ಲಿ ಕಳೆದ ರಾತ್ರಿಯೇ ಆಕಳೊಂದು ಬಿದ್ದಿದೆ. ಶನಿವಾರ ಬೆಳಗ್ಗೆ ಸಾರ್ವಜನಿಕರು ನೋಡಿದ್ದಾರೆ. ಹೀಗಾಗಿ ಅದನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಸಾಧ್ಯವಾಗಿಲ್ಲ. ನಂತರ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಶಿವಕುಮಾರ ಬಾಗೇವಾಡಿ, ಸಿಬ್ಬಂದಿ ಹನಮಂತ ಹಚ್ಯಾಳ, ಸಿದ್ದರಾಯ ಪಾರ್ಥನಳ್ಳಿ, ಮಾಲಕಣ್ಣ ತೆಗ್ಗೆಳ್ಳಿ, ಸಿದ್ದಣ್ಣ ರೋಡಗಿ, ಮಹಾಂತೆಶ ಜಾಲಿಹಾಳ, ಮುತ್ತುರಾಜ ಹುಣಸಗಿ ಹಾಗೂ ಹನಮಂತಪ್ಪ ಕುಂಬಾರ ಬಂದು ಸಾಕಷ್ಟು ಕಷ್ಟಪಟ್ಟು ಆಕಳನ್ನು ರಕ್ಷಣೆ ಮಾಡಿದ್ದಾರೆ.
ಗುಂಡಿಗಳನ್ನು ತೆಗೆದ ಮೇಲೆ ಅದರ ಕೆಲಸ ಆಗುವ ತನಕ ರಕ್ಷಣಾ ಬೇಲಿ ನಿರ್ಮಿಸುವ ಕೆಲಸ ಮಾಡದೆ ಇರೋವುದೇ ಇದೆಕ್ಕಲ್ಲ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣಮಕ್ಕಳು ಅಥವ ಹಿರಿಯರು ಆಕಸ್ಮಿಕವಾಗಿ ಬಿದ್ದು ಏನಾದರೂ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.