ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ತಳವಾರ ಪರಿವಾರ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಕುರಿತು ನೀಡಿದ ಮಾತಿನಂತೆ ಸರ್ಕಾರ ನಡೆದುಕೊಂಡಿದೆ. ಹೀಗಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಆಗಿದ್ದ ತಾಂತ್ರಿಕ ತೊಂದರೆಯನ್ನು ಸರಿಪಡಿಸಲಾಗಿದೆ. ವೆಬ್ ಸೈಟ್ ನಲ್ಲಿ ಪ್ರವರ್ಗ-1 ಅನ್ನು ತೆಗೆದು ಹಾಕಲು ಸಹ ಸೂಚಿಸಲಾಗಿದ್ದು, ಕೆಲ ದಿನಗಳಲ್ಲೇ ಎಸ್ಟಿ ಪ್ರಮಾಣಪತ್ರ ಸಿಗಲಿದೆ. ವಿಠ್ಠಲ ಹೆರೂರು ಕನಸು ನನಸಾಗಿದೆ ಎಂದು ಅನೇಕರು ಫೋನ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಕಾರಣಿಕರ್ತರಾದ ಸಿಎಂ ಬೊಮ್ಮಾಯಿ, ಚುನಾವಣೆ ಉಸ್ತುವಾರಿಗಳಾಗಿದ್ದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಿ.ಸಿ ಪಾಟೀಲ, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿ, ಎನ್.ಮಹೇಶ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ನುಡಿದಂತೆ ನಡೆದುಕೊಂಡ ಸಿಎಂ ಬೊಮ್ಮಾಯಿ ಆದಿಯಾಗಿ ಎಲ್ಲರಿಗೂ ಬೃಹತ್ ಅಭಿನಂದನಾ ಸಮಾರಂಭ ನಡೆಸಲಾಗುವುದು. ಕೋವಿಡ್ ಕಡಿಮೆ ಆದ ನಂತರ ಕಾರ್ಯಕ್ರಮ ನಡೆಸಲಾಗುವುದು. ಅಂದು ಕೆಲವು ವಿದ್ಯಾರ್ಥಿಗಳಿಗೆ ಎಸ್ಟಿ ಪ್ರಮಾಣಪತ್ರ ನೀಡಲಾಗುವುದು ಎಂದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿಗಳಾದ ಗುರು ತಳವಾರ, ನಿಂಗಣ್ಣ ಬಗಲಿ ಹಾಗೂ ಸುದರ್ಶನ ಜಿಂಗಾಣಿ, ಶಿವಕುಮಾರ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.