ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿರುವ ಪ್ರಕರಣ ಸಂಬಂಧ ಇದೀಗ ಹಲವರಿಗೆ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. ಬಿಗ್ ಬಾಸ್ ನಿಂದ ವರ್ತೂರು ಸಂತೋಷ್ ಬಂಧನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಲವು ಘಟಾನುಘಟಿಗಳ ಫೋಟೋ, ವಿಡಿಯೋ ವೈರಲ್ ಆಗಿವೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ, ರಾಜಕಾರಣಿ ನಿಖಲ್ ಕುಮಾರಸ್ವಾಮಿ, ವಿನಯ್ ಗುರೂಜಿ ಸೇರಿ ಅನೇಕರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಅವರೆಲ್ಲರ ಮನೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ತಂದೆ ಹೆಚ್.ಡಿ ಕುಮಾರಸ್ವಾಮಿ, ಅದು ಹುಲಿ ಉಗುರಿನ ಪೆಂಡೆಂಟ್ ಅಲ್ಲವೆಂದು ಹೇಳಿದ್ದಾರೆ. ಆದರೂ ನೋಟಿಸ್ ಕೊಟ್ಟು ಅವುಗಳ ಸತ್ಯಾಸತ್ಯೆಯ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳಿಸಲಾಗುತ್ತಿದೆ. ಒಂದು ವೇಳೆ ಅದೆಲ್ಲವೂ ಹುಲಿ ಉಗುರು ಆಗಿದ್ದರೆ ಎಲ್ಲರಿಗೂ ಸಂಕಷ್ಟ ಖಚಿತ. ಅದರಲ್ಲಿ ನಟ ಜಗ್ಗೇಶ್ ಸ್ವತಃ ತಾವೇ ಟಿವಿಯೊಂದರ ಸಂದರ್ಶನದಲ್ಲಿ ತಾವು ಧರಿಸಿರುವುದು ನಿಜವಾದ ಹುಲಿಯ ಉಗುರು. ನನಗೆ 20 ವರ್ಷ ತುಂಬಿದಾಗ ನನ್ನ ತಾಯಿ ನೀಡಿದ್ದು ಎಂದು ಹೇಳಿರುವ ವಿಡಿಯೋ ಇದ್ದು, ಮುಂದೇನಾಗುತ್ತೆ ಕಾದು ನೋಡಬೇಕಿದೆ.