ಪ್ರಜಾಸ್ತ್ರ ಸುದ್ದಿ
ವಿಜಯಪುರ: ತಾಲೂಕಿನ ತಿಕೋಟಾ ಗ್ರಾಮ ಪಂಚಾಯ್ತಿಯಲ್ಲಿ ಖೊಟ್ಟಿ ಠರಾವು ಮಂಡಿಸಿ ಆಸ್ತಿ ಕಬಳಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಖಾಸಗಿ ವೈದ್ಯರೊಬ್ಬರು ಕಳೆದ ಹಲವು ತಿಂಗಳುಗಳಿಂದ ನ್ಯಾಯಕ್ಕಾಗಿ ಅಲೆದಾಟ ನಡೆಸಿ, ಇದೀಗ ಉಪ ಲೋಕಾಯುಕ್ತರ ಮೊರೆ ಹೋಗಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಪಂಚಾಯ್ತ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರ ಬಂದ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿರುವ ವೈದ್ಯ ಚನ್ನಬಸಪ್ಪ ಊರ್ಫ್ ರಾಜು ಬೆಳಗಾವಿ, ತಮ್ಗೆ ನ್ಯಾಯ ಕೊಡಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು ತಿಕೋಟಾ ಗ್ರಾಮ ಪಂಚಾಯ್ತಿಯ ಈ ಹಿಂದಿನ ಪಿಡಿಒ ಹಾಗೂ 29 ಸದಸ್ಯರು ಸೇರಿ ಜೀವಂತವಿದ್ದ ಅಜ್ಜಿಯನ್ನು ಸತ್ತಿರುವುದಾಗಿ ಠರಾವು ಮಂಡಿಸಿ, ಅಜ್ಜಿ ಹೆಸರಿನ ಆಸ್ತಿಯನ್ನು ಬೇರೊಬ್ಬರ ಹೆಸರಿಗೆ ನೋಂದಾಯಿಸಿ ಠರಾವು ಮಂಡಿಸಿದ್ದಾರೆ. ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಸದರಿ ಠರಾವು ರದ್ಧತಿಗಾಗಿ ತಾಲೂಕು ಪಂಚಾಯ್ತಿ ಇಒ ಅವರ ಗಮನಕ್ಕೆ ನಿರಂತರವಾಗಿ ತಂದರೂ ಕ್ರಮ ತೆಗೆದುಕೊಂಡಿಲ್ಲ. ಇನ್ನಾದ್ರೂ ನ್ಯಾಯ ಕೊಡಿಸುವಂತೆ ವೈದ್ಯ ಚನ್ನಬಸಪ್ಪ ಉಪ ಲೋಕಾಯುಕ್ತರ ಬಳಿ ಮನವಿ ಮಾಡಿದ್ರು.