ಪ್ರಜಾಸ್ತ್ರ ಸುದ್ದಿ
ವಿಜಯಪುರ: ತಮ್ಮದೆಯಾದ ತಂಡವನ್ನು ಕಟ್ಟಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಹತ್ತಾರು ಸಂಘ, ಸಂಸ್ಥೆಗಳಿವೆ. ಅವುಗಳಲ್ಲಿ ವಿಜಯಪುರದ ಗಾನಯೋಗಿ ಸಂಘ ಸಹ ಒಂದಾಗಿದೆ. ಇದರಲ್ಲಿರುವ ಯುವ ಪಡೆ ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಪಾಳುಬಿದ್ದ ಬಾವಿಗಳ ಸ್ವಚ್ಛತೆ, ಕಲ್ಯಾಣಿಗಳ ಸ್ವಚ್ಛತೆ, ದೇವಸ್ಥಾನ, ಬಸ್ ನಿಲ್ದಾಣ ಹೀಗೆ ತಮ್ಮ ತಂಡದಿಂದ ಏನು ಮಾಡಲು ಸಾಧ್ಯವೋ ಆ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಗಾನಯೋಗಿ ಸಂಘದ ಯುವಕರು ವಿಜಯಪುರ ನಗದ ಪ್ರಮುಖ ಮಾರುಕಟ್ಟೆಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿ ಅದನ್ನು ಅಂದಗೊಳಿಸಿದ್ದಾರೆ.
ಸುಂದರವಾಗಿ ಬಣ್ಣ ಹಚ್ಚಿ ‘ಕರ್ನಾಟಕದಲ್ಲಿ ಶೌರ್ಯ ಮೆರೆದು ಗಟ್ಟಿಯಾಗಿ ನಿಂತ ದಿಟ್ಟ ವೀರ ಮಾತೆಯರು’ ಅನ್ನೋ ಬೋರ್ಡ್ ಬರೆದು, ನಾಡಿನ ಹತ್ತು ವೀರ ವನಿತೆಯರ ಹೆಸರಗಳನ್ನು ಬರೆದಿದ್ದಾರೆ. ಈ ಮೂಲಕ ಅವರ ಸ್ಮರಣೆ ಹಾಗೂ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಸಾರ್ವಜನಿಕರು ಗುಟ್ಕಾ, ಪಾನ್ ಮಸಾಲಾ ತಿಂದು ಉಗುಳಬೇಡಿ ಅನ್ನೋದು ಈ ತಂಡದ ಕಳಕಳಿಯ ಮನವಿಯಾಗಿದೆ. ಇದು ಎಲ್ಲರ ಮನವಿ ಸಹ ಆಗಿದೆ. ಒಂದಿಷ್ಟು ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿರುವ ಗಾನಯೋಗಿ ಸಂಘಕ್ಕೆ ಅಭಿನಂದನೆಗಳು.