ಪ್ರಜಾಸ್ತ್ರ ಸುದ್ದಿ
ತುಮಕೂರು: ಮೂಢನಂಬಿಕೆಯ ಪರಿಣಾಮವಾಗಿ ಹಸಿಗೂಸು ಬಲಿಯಾದ ಘಟನೆ ಜಿಲ್ಲೆಯ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಾಣಂತಿ ಹಾಗೂ ಕಂದಮ್ಮಗಳನ್ನು ಊರಿನ ಹೊರಗೆ ಸಣ್ಣದೊಂದು ಗುಡಿಸಲು ಹಾಕಿ ಬಿಡಲಾಗಿತ್ತು. ಇದೀಗ ಹೆಣ್ಣು ಕೂಸು ಮೃತಪಟ್ಟಿದೆ.
ಕಳೆದ 15 ದಿನಗಳಿಂದ ಸತತ ಮಳೆ, ಶೀತ ವಾತಾವರಣದಿಂದ ಮಗು ಪ್ರಾಣ ಕಳೆದುಕೊಂಡಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದರೂ ಸಹ ಜನರಿಗೆ ತಿಳಿ ಹೇಳಿ ಬಾಣಂತಿ ಹಾಗೂ ಕಂದಮ್ಮಗಳನ್ನು ಊರೊಳಗೆ ಕಳಿಸುವ ಕೆಲಸವಾಗಿಲ್ಲವಾ ಅನ್ನೋ ಪ್ರಶ್ನೆ ಮೂಡಿದೆ.
ಸೂತಕದ ಬಾಣಂತಿ ಊರಿಗೆ ಬಂದರೆ ಕೇಡಾಗುತ್ತೆ. ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗುವುದಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮುಗಿಸಿ ಊರಿಗೆ ಬಂದ ಬಾಣಂತಿಯನ್ನು ಜುಲೈ 18ರಂದು ಊರ ಹೊರಗೆ ಗುಡಿಸಲು ಹಾಕಿ ಬಿಡಲಾಗಿತ್ತು. ಕಾಡುಗೊಲ್ಲ ಸಮುದಾಯದ ಈ ಮೂಢನಂಬಿಕೆಯ ಕಾರಣಕ್ಕೆ 10 ದಿನ ಹೆಣ್ಣು ಮಗು ಪ್ರಾಣ ಕಳೆದುಕೊಂಡಿದೆ. ಬಾಣಂತಿಯರನ್ನು ಎಷ್ಟು ದಿನಗಳ ಕಾಲ ಹೀಗೆ ಊರ ಹೊರಗೆ ವಾಸಿಸಲು ಬಿಡುತ್ತಾರೆ ಅನ್ನೋದು ಸರಿಯಾಗಿ ತಿಳಿದು ಬಂದಿಲ್ಲ. ಹಣ್ಮಕ್ಕಳ ಮುಟ್ಟಿನ ಸಂದರ್ಭದಲ್ಲಿಯೂ ಕೆಲವೊಂದು ಮೂಢನಂಬಿಕೆ ಆಚರಣೆಗಳು ಇದ್ದು, ಇಂದಿಗೂ ಇವುಗಳನ್ನು ತಡೆಗಟ್ಟಲು ಆಗದೆ ಇರುವುದು ದುರಂತವೇ ಸರಿ.