ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿಯ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಚುನಾವಣೆ ರಾಜಕೀಯದಿಂದ ಹಿಂದೆ ಸರಿದರು. ಹೀಗಾಗಿ ಅವರ ಮಗನಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತೆ ಎನ್ನಲಾಗಿತ್ತು. ಆದರೆ, ಅದೆಲ್ಲವೂ ಉಲ್ಟಾ ಆಯಿತು. ಈಗ ಮಗನಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರಂತೆ.
ಹಾವೇರಿಯ ಸಂಸದ ಶಿವಕುಮಾರ್ ಉದಾಸಿ ವೈಯಕ್ತಿಕ ಕಾರಣಗಳಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಹೀಗಾಗಿ ತಮ್ಮ ಮಗ ಕಾಂತೇಶ್ ಗೆ ಇಲ್ಲಿಂದ ಟಿಕೆಟ್ ಕೊಡಿಸಲು ಈಶ್ವರಪ್ಪ ತಯಾರಿ ನಡೆಸಿದ್ದಾರಂತೆ. ಕಾಂತೇಶ್ ಸ್ಪರ್ಧಿಸಲಿ ಎಂದು ಹಲವು ನಾಯಕರು, ಮುಖಂಡರಿಗೆ ಬಯಕೆ ಇದೆ. ಟಿಕೆಟ್ ನೀಡುವಾಗ ಪಕ್ಷದ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ ಎಂದಿದ್ದಾರೆ.
ಯಡಿಯೂರಪ್ಪ ಜೊತೆಯಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿದ ನಾಯಕರಲ್ಲಿ ಕೆ.ಎಸ್ ಈಶ್ವರಪ್ಪ ಸಹ ಒಬ್ಬರು. ಬಿಎಸ್ವೈ ಇಬ್ಬರು ಪುತ್ರರಲ್ಲಿ ರಾಘವೇಂದ್ರ ಸಂಸದರಾಗಿದ್ದರೆ, ವಿಜಯೇಂದ್ರ ಶಾಸಕರಾಗಿದ್ದಾರೆ. ಹೀಗಾಗಿ ತಮ್ಮ ಮಗ ಕಾಂತೇಶಗೂ ರಾಜಕೀಯ ಭವಿಷ್ಯ ರೂಪಿಸಬೇಕು ಎಂದು ಈಶ್ವರಪ್ಪ ಕಸರತ್ತು ನಡೆಸಿದ್ದು, ಲೋಕಸಭೆಯಲ್ಲಾದರೂ ಟಿಕೆಟ್ ಕೊಡಿಸಬೇಕು ಅಂತಿದ್ದಾರೆ. ಇದಕ್ಕೆ ಹೈಕಮಾಂಡ್ ಏನು ಹೇಳುತ್ತೆ ಕಾದು ನೋಡಬೇಕು.