ಪ್ರಜಾಸ್ತ್ರ ಸುದ್ದಿ
ನವದೆಹಲಿ: ಚುನಾವಣೆ ಬಾಂಡ್ ಹಾಗೂ ಕಾಂಗ್ರೆಸ್ ಬ್ಯಾಂಕ್ ಖಾತೆಗಳ ಸ್ಥಗಿತ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಗುರುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ 11 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ನಮ್ಮ ಖಾತೆಗಳನ್ನು ಬಲವಂತದಿಂದ ಬಂದ್ ಮಾಡಿ 115.32 ಕೋಟಿ ರೂಪಾಯಿ ಹಿಂಪಡೆದಿದೆ.
ಇನ್ನು 210 ಕೋಟಿ ರೂಪಾಯಿ ಸೀಲ್ ಮಾಡಿದ್ದು ಅಲ್ಲದೆ ಕಾಂಗ್ರೆಸ್ ಠೇವಣಿ ಮೊತ್ತವಾದ 285 ಕೋಟಿ ರೂಪಾಯಿಗಳನ್ನು ಬಳಸದಂತೆ ತಡೆಹಿಡಿಯಲಾಗಿದೆ. ಈ ಮೂಲಕ ಪ್ರಧಾನ ವಿರೋಧ ಪಕ್ಷದ ಆರ್ಥಿಕ ಸ್ಥಿತಿಯನ್ನು ಕುಂಠಿತಗೊಳಿಸುವ ಯತ್ನವಾಗಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದರು.
ಚುನಾವಣೆ ಬಾಂಡ್ ಗಳು ಬಿಜೆಪಿ ದೊಡ್ಡ ಲಾಭ ತಂದುಕೊಟ್ಟಿವೆ. ಮತ್ತೊಂದು ಕಡೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಣಕಾಸು ದಾಳಿ ಅನುಭವಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲವೆಂದು ನಾವು ನಂಬುತ್ತೇವೆ ಅಂತಾ ಸೋನಿಯಾ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಮೇಲೆ ಪ್ರಧಾನಿ ಹಾಗೂ ಗೃಹ ಸಚಿವರು ಮಾಡಿದ ಅಪರಾಧಿ ಕೆಲಸವಿದು. ಚುನಾವಣೆಯಲ್ಲಿ ನಮ್ಮಲ್ಲಿ ಕುಗ್ಗಿಸುವ ಕುತಂತ್ರ ಕೆಲಸ ನಡೆದಿದೆ ಎಂದು ಕಿಡಿ ಕಾರಿದರು.