ಪ್ರಜಾಸ್ತ್ರ ಸುದ್ದಿ
ನೆಲಮಂಗಲ: ತಾಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ತಜ್ಞ ವೈದ್ಯರ ತಂಡ ಕಳೆದ ರಾತ್ರಿ ಭೇಟಿ ನೀಡಿ, ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿತು.
ಈ ವೇಳೆ ಮಾತ್ನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಮಂಜೇಗೌಡ, ಕೋವಿಡ್ ಸೋಂಕನ್ನ ನಿರ್ವಹಣೆ ಮತ್ತು ನಿಯಂತ್ರಣ ಮಾಡುವ ಉದ್ದೇಶದಿಂದ ಹೈಕೋರ್ಟ್ ಆದೇಶದಂತೆ ಜಿಲ್ಲಾ ತಜ್ಞರ ಸಮಿತಿ ರಚಿಸಿ, ಜಿಲ್ಲೆಯಲ್ಲಿರುವ ಎಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.
ಈಗಾಗಲೇ ಮಂಡ್ಯ ಮೆಡಿಕಲ್ ಕಾಲೇಜು ಮತ್ತು ಸ್ಯಾಂಜೋ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಅದೇ ರೀತಿ ಆದಿಚುಂಚನಗಿರಿ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಪಡೆದು ಸರ್ಕಾರ ನಿಗದಿ ಮಾಡಿರುವ ನಿಯಮಗಳನ್ನು ಹೇಗೆ ಪಾಲಿಸಲಾಗುತ್ತಿದೆ ಎಂದು ಪರಿಶೀಲನೆ ಮಾಡಲಾಗಿದೆ ಅಂತಾ ತಿಳಿಸಿದ್ರು.
ಚಿಕಿತ್ಸಾ ಕೇಂದ್ರದಲ್ಲಿ ಈಗಿರುವ 50 ಆಕ್ಸಿಜನ್ ಬೆಡ್ ಗಳನ್ನ 100 ಕ್ಕೆ ಹೆಚ್ಚಿಸುವಂತೆ ತಿಳಿಸಲಾಗಿದೆ. ಆಕ್ಸಿಜನ್ ಸಂಗ್ರಹಣ ಸಾಮರ್ಥ್ಯ ಹೆಚ್ಚಿಸಲು ಕಾಲಾವಕಾಶ ನೀಡಲಾಗಿದೆ. ಯಾರಿಗೆ ವೆಂಟಿಲೇಟರ್ ಅವಶ್ಯಕತೆಯಿದೆ ಅಂತವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ತಿಳಿಸಲಾಗಿದೆ. ಚಿಕಿತ್ಸಾ ಕೇಂದ್ರದ ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳನ್ನ ಅಳವಡಿಸಲು ತಿಳಿಸಲಾಗಿದೆ. ಚಿಕಿತ್ಸೆಯ ನಂತರ ಗುಣಮುಖವಾದ ರೋಗಿಗಳಿಗೆ ಆರೋಗ್ಯದ ರಕ್ಷಣೆಯ ಬಗ್ಗೆ ನೀಡಬೇಕಾದ ಮಾರ್ಗದರ್ಶನವನ್ನ ತಿಳಿಸಲಾಗಿದೆ ಎಂದರು.
ತಜ್ಞರ ತಂಡ ಸೋಂಕಿತರೊಡನೆ ವಿಡಿಯೋ ಕಾಲ್ ಮೂಲಕ ಮೂಲಭೂತ ಸೌಕರ್ಯಗಳು, ವೈದ್ಯರು ನೀಡುತ್ತಿರುವ ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಭೇಟಿಯ ವೇಳೆ ಸುಧೀರ ನಾಯಕ, ಡಾ.ಹರೀಶ, ಡಾ.ಶಶಿಧರ, ರಾಮಕೃಷ್ಣ, ಟಿಎಚ್ಒ ಶರತ, ಅನುಪಮ ಮತ್ತು ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.