ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಈಗ 1 ಲೋಕಸಭೆ ಹಾಗೂ 2 ವಿಧಾನಸಭೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಇವುಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ದಿವಂಗತ ಸುರೇಶ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಟಿಕೆಟ್ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ನಾಯಕರು ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಪದೆಪದೆ ಹೇಳುತ್ತಾರೆ. ಆದ್ರೆ, ಮಾಡುವುದು ಮಾತ್ರ ಕುಟುಂಬ ರಾಜಕಾರಣವೆಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಕೇಳಿ ಬರ್ತಿವೆ. ಕರ್ನಾಟಕದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳಸಿದವರಲ್ಲಿ ದಿವಂಗತ ಅನಂತಕುಮಾರ ಕೂಡಾ ಒಬ್ಬರು. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವ ವಿಚಾರ ಬಂದಾಗ, ಕುಟುಂಬ ರಾಜಕಾರಣ ಮಾಡಲ್ಲವೆಂದವರು, ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಮಾಡಿದ್ದೇನು ಅನ್ನೋ ಪ್ರಶ್ನೆ ಕೇಳುತ್ತಿದ್ದಾರೆ.
ಬಿಜೆಪಿ ಒಂದು ಕುಟುಂಬವನ್ನು ಮುಗಿಸಲು ಕುಟುಂಬ ರಾಜಕಾರಣ ಮಾಡಲ್ಲ ಅನ್ನೋ ನೆಪ ಹೇಳಿ, ತಮ್ಗೆ ಬೇಕಾದವರಿಗೆ ಮಾತ್ರ ಟಿಕೆಟ್ ನೀಡುತ್ತಾ ಫ್ಯಾಮಿಲಿ ಪಾಲಿಟಿಕ್ಸ್ ಬೆಳೆಸಿಕೊಂಡು ಬರುತ್ತಾರೆ ಎಂದು ಕಿಡಿ ಕಾರುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಪದೆಪದೆ ಕುಟುಂಬ ರಾಜಕಾರಣ ಅನ್ನೋ ಅಸ್ತ್ರ ಪ್ರಯೋಗಿಸುವ ಮೊದ್ಲು ಬಿಜೆಪಿ ಒಮ್ಮೆ ತನ್ನ ಹಿನ್ನೆಲೆ ನೋಡಿಕೊಳ್ಳಬೇಕು ಅಂತಾ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು ಇದಕ್ಕೆ ಏನು ಉತ್ತರಿಸುತ್ತಾರೋ ನೋಡಬೇಕು.