ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ರಾತ್ರಿ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮೀನು ಅಂಗಡಿಯ ಮಾಲೀಕನ ಮೇಲೆ ಲಾಂಗ್ ಬೀಸಿ ಹಲ್ಲೆ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಫ್ತಾ ವಸೂಲಿಗೆ ಬಂದ ರೌಡಿಯೊಬ್ಬ ಲಾಂಗ್ ಬೀಸಿದ್ದಾನೆ. ಬೆಳ್ತಂಗಡಿ ಮೂಲದ ಮೀನು ವ್ಯಾಪಾರಿ ಮೇಲೆ ಸುರೇಶ್ ಎಂಬಾತ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಟೀ ಅಂಗಡಿಯ ಯುವಕರ ಮೇಲೆ ಹಲ್ಲೆ ಮಾಡಿರುವುದು ಘಟನೆ ನಡೆದಿದೆ. ಈಗ ಮತ್ತೆ ಇಂತಹದ್ದೆ ಘಟನೆ ನಡೆದಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಡಿ ರೌಡಿಗಳನ್ನು ಮೊಳಕೆಯಲ್ಲಿ ಚಿವುಟಿ ಹಾಕುವುದು ಬಿಟ್ಟು ಪೊಲೀಸರು ಏನು ಮಾಡುತ್ತಿದ್ದಾರೆ. ಇವರಿಗೆ ಗನ್ ಕೊಟ್ಟಿರುವುದು ಯಾಕೆ? ಇಂಥಾ ರೌಡಿಗಳಿಂದ ದುಡಿದು ತಿನ್ನುವ ಸಾಮಾನ್ಯ ಜನರು ಪ್ರಾಣ ಕಳೆದುಕೊಳ್ಳಬೇಕಾ, ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗುತ್ತಿದೆ.