ಸಿಂದಗಿ: ತಾಲೂಕಿನ ಬೋರಗಿ-ಪುರದಾಳ ಗ್ರಾಮದ ಭೀಮಾಶಂಕರ ಮಠದ ಜಾತ್ರೆ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಠದ ಮೂಲ ಗುರುಗಳಾದ ವಿಶ್ವರಾಧ್ಯರ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಶಿವರಾತ್ರಿಯಾದ 9 ದಿನಗಳ ಬಳಿಕ ಜಾತ್ರೆ ನಡೆಯುತ್ತೆ.
ಶಿವೋಗದಂದು(ಶಿವರಾತ್ರಿ) ಶುರುವಾಗುವ ಪುರಾಣ ಪ್ರವಚನ ಸತತ 9 ದಿನಗಳ ಕಾಲ ನಡೆಯುತ್ತೆ. ನಾಡಿನ ಹಲವು ಮಠಗಳು ಮಠಾಧೀಶರು ಬೋರಗಿ ಗ್ರಾಮದ ಮಠಕ್ಕೆ ಆಗಮಿಸಿ, ಆಧ್ಯಾತ್ಮ ಹಾಗೂ ಶಿವಧ್ಯಾನದ ಕುರಿತು ಹಿತವಚನ ನೀಡಿಕೊಂಡು ಬರ್ತಿದ್ದಾರೆ. ಅದೇ ರೀತಿ ಈ ಬಾರಿಯೂ 9 ದಿನಗಳ ಕಾಲ ಭಕ್ತರಿಗೆ ಜ್ಞಾನಸುಧೆ ಹರಿಸಿದ್ರು.
ಇನ್ನು ಪುರಾಣದ ಕೊನೆಯ ದಿನವಾದ ಶನಿವಾರ ರಾತ್ರಿ ಬಸವರಾಜ ಎಂ ಬಡಿಗೇರ ಅವರ ಸಂಪಾದನೆಯಲ್ಲಿ ಮೂಡಿ ಬಂದಿರುವ ‘ಪ್ರಾರ್ಥನಾ ಪ್ರಭೆ’ ಅನ್ನೋ ಕಿರು ಹೊತ್ತಿಗೆಯ ಮೂರನೇ ಆವೃತ್ತಿಯನ್ನ ಬಿಡುಗಡೆ ಮಾಡಲಾಯ್ತು. ವಿಶ್ವರಾಧ್ಯ ಮಠದ ಶ್ರೀಗಳಾದ ಮಹಾಲಿಂಗೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಸಾಧು ಸಂತರು ಕೃತಿಯನ್ನ ಲೋಕಾರ್ಪಣೆಗೊಳಿಸಿದ್ರು. ಇದೇ ವೇಳೆ ಪುಸ್ತಕದ ದಾನಿಗಳನ್ನ, ಪ್ರವಚನ ನೀಡಿದ ಚಿಂತಕರನ್ನ ಸನ್ಮಾನಿಸಲಾಯ್ತು.
ಇಂದು ಸಂಜೆ ಅದ್ಧೂರಿ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಇದನ್ನ ಕಣ್ತುಂಬಿಕೊಳ್ಳಲು ತಾಲೂಕಿನ ಬೇರೆ ಬೇರೆ ಗ್ರಾಮದ ಅಪಾರ ಸಂಖ್ಯೆಯ ಭಕ್ತರು ಬೋರಗಿ ಗ್ರಾಮಕ್ಕೆ ಆಗಮಿಸಿದ್ದು, ಜಾತ್ರೆಯ ಸಂಭ್ರಮದಲ್ಲಿ ಮುಳುಗಿದ್ದಾರೆ.