ಸಿಂದಗಿ: ತಾಲೂಕಿನ ಚಟ್ನಳ್ಳಿಯಿಂದ ಬರುವ ಬಸ್ ಸಮಸ್ಯೆಯಾಗ್ತಿದ್ದು, ವಿದ್ಯಾರ್ಥಿಗಳಿಂದು ಪ್ರತಿಭಟನೆ ನಡೆಸಿದ್ರು. ನಗರದ ಬಸ್ ಡಿಪೋ ಬಳಿ ಸೇರಿದ್ದ ನೂರಾರು ವಿದ್ಯಾರ್ಥಿಗಳು, ಚಟ್ನಳ್ಳಿಯಿಂದ ಸಿಂದಗಿಗೆ ಬರಲು ಏಕೈಕ ಬಸ್ ಇದೆ. ಇದ್ರಿಂದಾಗಿ ಬೆಳಗ್ಗೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
ಚಟ್ನಳ್ಳಿಯಿಂದ ಹೊರಡುವ ಬಸ್, ಗುಂದಕನಾಳ, ಆಲಿಮಡು, ಸಲಾದಹಳ್ಳಿ, ಹೊನ್ನಳ್ಳಿ, ಕುಳಗೇರಿ, ಬ್ರಹ್ಮದೇವನಮಡು, ಖಾನಾಪುರ, ಖಾನಾಪುರ ಕೆಕೆ, ಕರವಿನಹಾಳ, ಕರವಿನಹಾಳ ತಾಂಡಾ, ಖಾನಾಪುರತೋಟ, ಒಂದಾಲ, ಡಂಬಳ, ಗೋಲಗೇರಿ, ಸಾಸಾಬಾಳ, ಯಂಕಂಚಿ, ಮನ್ನಾಪುರ ಮಾರ್ಗವಾಗಿ ಸಿಂದಗಿ ತಲುಪುತ್ತೆ. ಸುಮಾರು 15ಕ್ಕೂ ಊರುಗಳನ್ನ ದಾಟಿಕೊಂಡು ಬರಲು ಇರೋದು ಒಂದೇ ಒಂದು ಬಸ್. ಒಂದು ಊರಿನಿಂದ 10 ವಿದ್ಯಾರ್ಥಿಗಳು ಅಂತಾ ಹೇಳಿದ್ರೂ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಂದಗಿಯಲ್ಲಿರುವ ವಿವಿಧ ಕಾಲೇಜುಗಳಿಗೆ ಬರ್ತಾರೆ.
ವಿದ್ಯಾರ್ಥಿಗಳ ಜೊತೆಗೆ ಸಹ ಪ್ರಯಾಣಿಕರು ಬರೋದ್ರಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹೀಗಾಗಿ ಸುಮಾರು 50 ವಿದ್ಯಾರ್ಥಿಗಳು ಬಸ್ ಟಾಪ್ ಮೇಲೆ ಕುಳಿತುಕೊಂಡು ಬರ್ತಾರೆ. ಬಸ್ ಸಹ ಹಳೆಯದಾಗಿದ್ದು, ಯಾವಾಗ ಏನಾಗುತ್ತೆ ಅನ್ನೋ ಜೀವ ಭಯದಲ್ಲಿ ವಿದ್ಯಾರ್ಥಿಗಳು ನಿತ್ಯ ಸಂಚಾರ ಮಾಡಬೇಕಾಗಿದೆ. ಐಷಾರಾಮಿ ರೆಸಾರ್ಟ್, ಹೋಟೆಲ್, ವಿಲ್ಲಾಗಳಲ್ಲಿ ರಾಜಕಾರಣ ಮಾಡುವ ನಾಯಕರುಗಳೆ ನಮ್ಮ ಸ್ಥಿತಿ ನೋಡಿ ಅಂತಾ ವಿದ್ಯಾರ್ಥಿಗಳು ಪ್ರಶ್ನೆ ಮಾಡ್ತಿದ್ದಾರೆ. ಇದೇ ವೇಳೆ ಬಸ್ ಸಮಸ್ಯೆ ಬಗೆಹರಿಸಬೇಕೆಂದು ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯ್ತು.