ಪ್ರಜಾಸ್ತ್ರ ಸುದ್ದಿ
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ವಲಯದ ವ್ಯಾಪ್ತಿಯ ಬಳ್ಳೂರುಹುಂಡಿಯಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಮಂಗಳವಾರ ಮುಂಜಾನೆ ಸೆರೆ ಹಿಡಿಯಲಾಗಿದೆ.
ಕಳೆದ ಮೂರು ದಿನಗಳಿಂದ ಹುಲಿ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕಲ್ಲಖಾರಹಂಡಿಯಲ್ಲಿ ಹಸುವೊಂದನ್ನು ಕೊಂದಿತ್ತು. ಹಸು ಕೊಂದ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಅಲ್ಲದೇ ಬೋನ್ ಸಹ ಇಡಲಾಗಿತ್ತು. ಇಂದು ಮುಂಜಾನೆ ಹಸುವಿನ ಕಳೇಬರ ತಿನ್ನಲು ಬಂದಾಗ ಅರವಳಿಕೆ ತಜ್ಞ ಡಾ.ವಾಸೀಂ ಅವರು ನೀಡಿದ ಅರವಳಿಕೆಯಿಂದ ಸಿಕ್ಕಿ ಬಿದ್ದಿದೆ.
ಈ ಭಾಗದ ಜನರ ಭಯ ಮೂಡಿಸಿದ್ದ 10 ವರ್ಷದ ಗಂಡು ಹುಲಿ ಸೆರೆಯಾಗಿದೆ. ಇದನ್ನು ಮೈಸೂರಿನ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಹುಲಿ ಸೆರೆ ಹಿಡಿಯವ ಕಾರ್ಯದಲ್ಲಿ 12 ಅಧಿಕಾರಿಗಳು, 195 ಸಿಬ್ಬಂದಿ, 25 ಗಿರಿಜನರು, 5 ಜಿಎಸ್ಎಂ ಕ್ಯಾಮೆರಾ, ಒಂದು 50 ಸಿ ಕ್ಯಾಮೆರಾ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು.