ಪ್ರಜಾಸ್ತ್ರ ಸುದ್ದಿ
ತೀರ್ಥಹಳ್ಳಿ: ಮನೆಯಲ್ಲಿ ನಗು ನಗುತ್ತಾ ಆಟವಾಡಿಕೊಂಡಿದ್ದ 1 ವರ್ಷದ ಕೂಸು ಅಡಿಕೆ ನುಂಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಹೆದ್ದೂರಿನಲ್ಲಿ ಶನಿವಾರ ನಡೆದಿದೆ. ಶ್ರೀಹಾನ(1) ಮೃತ ಕೂಸಾಗಿದೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸಂದೇಶ ಹಾಗೂ ಅರ್ಚನಾ ದಂಪತಿಯ ಮಗು, ತಟ್ಟೆಯಲ್ಲಿ ಇಟ್ಟಿದ್ದ ಅಡಿಕೆ ನುಂಗಿದೆ. ಇದ್ರಿಂದಾಗಿ ಉಸಿರಾಟದ ತೊಂದರೆಯಾಗಿ ಒದ್ದಾಡುತ್ತಿದೆ. ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ. ಬಳಿಕ ತಾಲೂಕಿನ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ವಿಧಿಯಾಟಕ್ಕೆ ಮಗು ಸಾವನ್ನಪ್ಪಿದೆ.
ಕೋವಿಡ್ ನಿಂದಾಗಿ ತಂದೆ ಸಂದೇಶ ಮಗುವನ್ನ ಹೆದ್ದೂರಿನಲ್ಲಿ ಬಿಟ್ಟಿದ್ರು. ಭಾನುವಾರ ಮಗುವನ್ನ ಕರೆದುಕೊಂಡು ಹೋಗಲು ಬರುವವರಿದ್ದರು. ಆದ್ರೆ, ವಿಧಿ ಅಡಿಕೆ ರೂಪದಲ್ಲಿ ಮಗುವನ್ನ ನುಂಗಿದೆ. ಶ್ರೀಹಾನ, ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಆರೋಗ್ಯವಂತ ಮಗು ಅನ್ನೋ ಪುರಸ್ಕಾರದ ಜೊತೆಗೆ ನಗದು ಬಹುಮಾನ ಸಹ ಪಡೆದಿದ್ದ. ಆದ್ರೆ, ಮನೆಯಲ್ಲಿನ ಅಡಿಕೆ ಮಗುವಿನ ದುರಂತ ಅಂತ್ಯಕ್ಕೆ ಕಾರಣವಾಗಿದೆ.