ಬೆಂಗಳೂರು: ಮಂಗಳೂರು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ವಿಡಿಯೋವನ್ನ, ಸಿಎಂ ಕಟ್ ಆ್ಯಂಡ್ ಪೇಸ್ಟ್ ಎಂದು ಬೆಳಗ್ಗೆ ಕುಟುಕಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್ಡಿಕೆ ಅದನ್ನ ಸಾಬೀತು ಪಡಿಸಿ ಎಂದು ಸವಾಲು ಹಾಕಿದ್ದಾರೆ.
ಸಿಎಂ ಬಾಲಿಶ ಹೇಳಿಕೆ ನೀಡಿದ್ದಾರೆ. ನಾನು ಬಿಡುಗಡೆ ಮಾಡಿದ ವಿಡಿಯೋ ಕಟ್ ಆ್ಯಂಡ್ ಪೇಸ್ಟ್ ಇದ್ರೆ ಅದನ್ನ ಸಾಬೀತು ಪಡಿಸಲಿ ಅಂತಾ ಸವಾಲು ಹಾಕಿದ್ರು. ಮಂಗಳೂರು ಶಾಂತವಾಗಿದ್ರೆ ವಾಣಿಜ್ಯಿಕವಾಗಿ ಬೆಳೆಯುತ್ತೆ. ಅಲ್ಲಿ ಶಾಂತಿ ಸ್ಥಾಪನೆ ಆಗಬೇಕು ಅಂದ್ರೆ ಬಿಜೆಪಿ ತೆಪ್ಪಗಿರಬೇಕು ಎಂದು ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ.
ಸಿಡಿ ಸತ್ಯಾಸತ್ಯೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯಾ? ಇದಕ್ಕೆ ನಿಮ್ಮ ಆತ್ಮಸಾಕ್ಷಿಯನ್ನ ಪ್ರಶ್ನೆ ಮಾಡಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ಸಿಡಿಯನ್ನು ನೀವು ಸೃಷ್ಟಿಸಿಕೊಂಡಿರುವ ಕಟ್ ಆ್ಯಂಡ್ ಪೇಸ್ಟ್ ಬಿಜೆಪಿ ಸರ್ಕಾರ ಎಂದಿಕೊಂಡಿದ್ದೀರಾ ಅಂತಾ ಭರ್ಜರಿಯಾಗಿ ಟಾಂಗ್ ಕೊಟ್ಟಿದ್ದಾರೆ.