ಬೆಂಗಳೂರು: ಪತ್ರಿಕೆಯೊಂದರ ಸಂಪಾದಕರ ವಿರುದ್ಧ ದೂರು ದಾಖಲಿಸಿರುವುದು ಸೂಕ್ತ ಕ್ರಮ ಅಲ್ಲವೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೇಳಿದೆ.
ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಅನ್ನೋ ಕಾರಣಕ್ಕೆ ದೂರು ದಾಖಲಿಸಲಾಗಿದೆ. ಇದನ್ನ ವಿರೋಧಿಸಿರುವ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಸಿಎಂಗೆ ಪತ್ರ ಬರೆದಿದ್ದಾರೆ.
ಪತ್ರಿಕೆಯಲ್ಲಿ ಬಂದಿರುವ ಸುದ್ದಿ ಸುಳ್ಳು ಅಥವ ಉದ್ದೇಶಪೂರ್ವಕವಾಗಿದ್ದರೆ, ಸ್ಪಷ್ಟನೆ ಹಾಗೂ ವಿವರಣೆ ನೀಡುವುದು ಕ್ರಮಬದ್ಧವಾಗಿದೆ. ಇದನ್ನ ಬಿಟ್ಟು, ಸುಳ್ಳು ಸುದ್ದಿಯ ಹೆಸರಿನಲ್ಲಿ ದೂರು ದಾಖಲಿಸುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಯಾಕಂದ್ರೆ, ಈ ಹಿಂದೆ ಈ ರೀತಿಯ ಪ್ರಕರಣಗಳು ನಡೆದಾಗ, ನೀವು ಸ್ಪಂದಿಸಿದ್ದೀರಿ. ಅಲ್ದೇ, ಮಾಧ್ಯಮ ಸ್ನೇಹಿಯಾಗಿ ನಡೆದುಕೊಂಡಿದ್ದೀರಿ. ಈ ಪ್ರಕರಣ ನಿಮ್ಮ ಗಮನಕ್ಕೆ ಬಾರದೇ ಇರಬಹುದು. ಇದರ ಕುರಿತು ಮಾಹಿತಿ ತರಿಸಿಕೊಂಡು ಪ್ರಕರಣವನ್ನ ಅಂತ್ಯಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.