ಕೃಷ್ಣರಾಜಪೇಟೆ: ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ, ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕರೋನಾ ನಿಯಂತ್ರಣ ಅಗತ್ಯ ಕ್ರಮಗಳ ಸಂಬಂಧವಾಗಿ ಜಾಗೃತ ಸಮಿತಿಯ ಸಭೆ ನಡೆಯಿತು.
ಮುಂಬೈ, ಪಾಂಡಿಚೇರಿ ಸೇರಿದಂತೆ ಹೊರ ರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಯಿಂದ ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಿರುವ 10 ಜನರನ್ನ ಪಟ್ಟಣದ ನವೋದಯ ಮಾದರಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ಮಾಡಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗ್ರಾಮಗಳಿಗೆ ಯಾರೇ ಹೊಸ ವ್ಯಕ್ತಿಗಳು ಆಗಮಿಸಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಸಮೀಪದ ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಅಥವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಬೇಕು.
ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿರುವವರಿದ್ದರೆ ಕಡ್ಡಾಯವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕು. ತಾಲೂಕಿನಲ್ಲಿ ಕರೋನಾ ಲಾಕ್ ಡೌನ್ ನಿಯಮಗಳನ್ನ ಕರಾರುವಕ್ಕಾಗಿ ಪಾಲಿಸುತ್ತಿರುವುದರಿಂದಾಗಿ ಈವರೆಗೆ ಒಂದೇ ಒಂದು ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಜನಸಾಮಾನ್ಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು ಎಂದರು.
ಜನಸಾಮಾನ್ಯರ ಒತ್ತಡ ಹಾಗೂ ಮನವಿಯ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ದಿನ ಮಾಂಸದಂಗಡಿಗಳನ್ನ ಪಟ್ಟಣದಲ್ಲಿ ತೆರೆಯಲು ಅನುಮತಿ ನೀಡಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ತಹಶೀಲ್ದಾರ್ ಉತ್ತರಿಸಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ, ಪಟ್ಟಣ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪುರಸಭೆ ಮುಖ್ಯಾಧಿಕಾರಿ ಸತೀಶಕುಮಾರ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ ಮತ್ತಿತರರು ಉಪಸ್ಥಿತರಿದ್ದರು.