ಪ್ಯಾಕೇಜ್: ಸ್ಪೆಷಲ್ ಡೆಸ್ಕ್
ಮಡಿಕೇರಿ: ಇದು ನಿಜಕ್ಕೂ ಅತ್ಯಂತ ನೋವಿನ ಸಂಗತಿ. ಇದನ್ನ ಓದಿದ ಪ್ರತಿಯೊಬ್ಬರ ಮನಸ್ಸು ಒಂದು ಕ್ಷಣ ಕಂಪಿಸುತ್ತೆ. ಯಾಕಂದ್ರೆ, ಮಗಳ ಮದುವೆ ಬಗ್ಗೆ ಏನೆಲ್ಲ ಕನಸು ಕಟ್ಟಿಕೊಂಡು, ಆಕೆಯ ಬದುಕಿಗೊಂದು ಸುಂದರ ಬಾಳು ರೂಪಿಸಲು ಹೊರಟ ತಂದೆ ಕೊನೆಯ ಕ್ಷಣದಲ್ಲಿ ಇಲ್ಲವಾಗ್ತಾರೆ. ಇದ್ಯಾವೋದು ಸಿನ್ಮಾ ಕಥೆಯಲ್ಲ. ನಿಜ ಜೀವನದ ಅತ್ಯಂತ ನೋವಿನ ಘಟನೆ.
ಮಡಿಕೇರಿಯ ಫೋಟೋಗ್ರಾಫರ್ ದಾಮೋದರ ಎಂಬುವವರ ಮಗಳ ಮದುವೆ ತಿರುಪತಿಯ ತಿಮ್ಮಪ್ಪನ ಸನ್ನಿಧಾನದಲ್ಲಿ ನಿಶ್ಚಯವಾಗಿತ್ತು. ಮೈಸೂರಿನ ವಿಷ್ಣುವರ್ಧನ ಅನ್ನೋ ವರನ ಜೊತೆ ನವೆಂಬರ್ 3ರಂದು ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಬಂಧು ಬಳಗದವರ ಜೊತೆಗೆ ಶುಕ್ರವಾರವೇ ತಿರುಪತಿಗೆ ತೆರಳಿದ್ದಾರೆ. ಆದ್ರೆ, ಶನಿವಾರ ಸಂಜೆ ವಿಧಿ ತನ್ನ ಆಟವಾಡಿದೆ.
ಶನಿವಾರ ರಾತ್ರಿ ದಾಮೋದರಿಗೆ ಎದೆ ನೋವು ಕಾಣಿಸಿಕೊಂಡಿದೆ. ಸುಮಾರು 2.30ಕ್ಕೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಅತ್ತ ಮಗಳು ಅರ್ಪಿತಾ ತಂದೆಯ ಬರುವಿಕೆಯ ನಿರೀಕ್ಷೆಯಲ್ಲಿದ್ದಾಳೆ. ಮಗಳ ಮದುವೆ ನಿಲ್ಲಬಾರದೆಂದು ಆಘಾತಕಾರಿ ವಿಚಾರ ಮುಚ್ಚಿಟ್ಟಿದ್ದಾರೆ. ಯಾಕಂದ್ರೆ ಇದು ತಂದೆಯ ಕನಸಿನ ಮದುವೆ. ನಿಲ್ಲಬಾರದು ಅನ್ನೋ ಕಾರಣಕ್ಕೆ ಎಲ್ಲರೂ ಇದನ್ನ ಗುಟ್ಟಾಗಿಟ್ಟಿದ್ದಾರೆ. ಮಾಂಗಲ್ಯ ಧಾರಣೆ ಸಮಯ ಮೀರಿದ್ರೂ ತಂದೆ ಬರದಿರುವುದಕ್ಕೆ ಮಗಳು ಚಡಪಡಿಸಿದ್ದಾಳೆ. ಯಾರನ್ನ ಕೇಳಿದ್ರೂ ಸರಿಯಾಗಿ ಮಾಹಿತಿ ಕೊಟ್ಟಿಲ್ಲ. ಹುಷಾರಿಲ್ಲ, ಬರ್ತಾರೆ ಅಂತಾ ಹೇಳಿ ಮದುವೆ ಮುಗಿಸಿದ್ದಾರೆ.
ಮಾಂಗಲ್ಯ ಧಾರಣೆ ಬಳಿಕ ಮಗಳಿಗೆ ತನ್ನ ಪ್ರೀತಿಯ ತಂದೆ, ತಮ್ಮನ್ನು ಬಿಟ್ಟು ಬಹುದೂರ ಹೋಗಿದ್ದಾರೆ ಅನ್ನೋ ಸುದ್ದಿ ತಿಳಿಸಿದ್ದಾರೆ. ಪಾಪ ಆಕೆಗೆ ಬರಸಿಡಿಲು ಬಡೆದಂತಾಗಿದೆ. ತಂದೆಯ ಸಾವಿನ ಸುದ್ದಿಯನ್ನ ಅರಗಿಸಿಕೊಳ್ಳಲಾಗದ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಮೃತದೇಹವನ್ನ ಮಡಿಕೇರಿಗೆ ತಂದು ಅಂತ್ಯ ಸಂಸ್ಕಾರ ಮಾಡಲಾಗಿದೆ.
ನಿಜಕ್ಕೂ ಇದು ಕರುಣಾಜನಕ ಸ್ಥಿತಿ. ಮಗಳ ಮದುವೆಯನ್ನ ಕಣ್ತುಂಬ ನೋಡಬೇಕೆಂದು ಕನಸು ಕಾಣ್ತಿದ್ದ ತಂದೆ ಕೊನೆ ಕ್ಷಣದಲ್ಲಿ ಕಣ್ಮುಚ್ಚಿ ಹೋಗುವುದು ಯಾರಿಗೂ ಬೇಡ.