ಪ್ರಜಾಸ್ತ್ರ ಸುದ್ದಿ
ಸಿಂದಗಿ: ರಾಜ್ಯ ಸಂಘದಿಂದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಫೆಬ್ರವರಿ 10ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉತ್ತರ ವಲಯ ಅಧ್ಯಕ್ಷ ಬಸನಗೌಡ ಧರ್ಮಗೊಂಡ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತಪರ ಬಜೆಟ್ ರೂಪಿಸಲು ಹಕ್ಕೊತ್ತಾಯ ಮಾಡುವ ನಿಟ್ಟಿನಲ್ಲಿ ಬೃಹತ್ ರೈತ ಸಮಾವೇಶ ನಡೆಸಲಿದೆ ಎಂದರು.
ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಮಾತನಾಡಿದ ಅವರು, ಸರ್ಕಾರಗಳು ರೈತರಿಗೆ ಮುಟ್ಟುವಂತಹ ಬಜೆಟ್ ಮಂಡನೆ ಮಾಡುತ್ತಿಲ್ಲ. ದೇಶದ ಬೆನ್ನೆಲಬು ರೈತ ಎಂದು ಹೇಳುತ್ತಾರೆ. ಆದರೆ, ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವ ವ್ಯವಸ್ಥೆ ಮಾಡಿಲ್ಲ. ಸಂಪೂರ್ಣವಾಗಿ ರೈತರ ಸಾಲ ಮನ್ನಾ ಮಾಡಬೇಕು. ಬರಗಾಲ ಪ್ರಾರಂಭವಾಗಿದ್ದು ಜಾನುವಾರುಗಳಿಗೆ ಮೇವು, ನೀರನ ಅಭಾವ ಉಂಟಾಗುತ್ತಿದೆ. ನೀರನ ಅಭಾವದ ಕುರಿತು ಇತ್ತೀಚೆಗೆ ಶಾಸಕರು ಡಿಸಿಎಂ ಡಿ.ಕೆ ಶಿವಕುಮಾರ್ ಗಮನಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆ.
ಉತ್ತರ ಕರ್ನಾಟಕ ಭಾಗದ ಬಹುತೇಕ ರೈತರು ಮಳೆಯನ್ನು ಅವಲಂಬಿಸಿದ್ದಾರೆ. ಬರಗಾಲದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ನೀರಿನ ವ್ಯವಸ್ಥೆ ಮಾಡಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ರೈತರ ಮಕ್ಕಳಿಗೆ ಹೆಣ್ಣು ಕೊಡುವ ಮನೆಯವರಿಗೆ 5 ಲಕ್ಷ ರೂಪಾಯಿ ಪ್ಯಾಕೇಜ್ ಕೊಡಬೇಕು. ಇದರಿಂದ ರೈತರಿಗೆ ಆರ್ಥಿಕ ಸುಧಾರಣೆಯಾಗಲು ಅನುಕೂಲವಾಗುತ್ತದೆ ಅಂತಾ ಹೇಳಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಬಮ್ಮನಳ್ಳಿ, ತಾಲೂಕು ಅಧ್ಯಕ್ಷ ದಶರತಸಿಂಗ್, ತಾಲಕು ಪ್ರಧಾನ ಕಾರ್ಯದರ್ಶಿ ಶಾಂತಗೌಡ ಮಣೂರು ಸೇರಿ ಅನೇಕರು ಉಪಸ್ಥಿತರಿದ್ದರು.