ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕುರಿತು ಪಕ್ಷದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ನನ್ನ ತಂದೆ ಸಮಾನ, ಕುಮಾರಸ್ವಾಮಿ ಸಹೋದರ ಸಮಾನ. ಆದ್ರೆ, ಪಕ್ಷದ ಅಧ್ಯಕ್ಷನಾದ ನನಗೂ ಒಂದು ಮಾತು ಹೇಳದೆ ದೆಹಲಿಗೆ ಹೋಗಿದ್ದು ನೋವಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ಏನು ಚರ್ಚೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಮೈತ್ರಿ ಬಗ್ಗೆ ಪಕ್ಷದಲ್ಲಿ ಎಲ್ಲಿಯೂ ಚರ್ಚೆಯಾಗಿಲ್ಲ. ಹೀಗಾಗಿ ಪಕ್ಷದಲ್ಲಿ, ಪಕ್ಷದ ನಾಯಕರಲ್ಲಿ ಅಸಮಾಧಾನವಿದೆ. ಅಕ್ಟೋಬರ್ 16ರಂದು ಸಭೆ ಮಾಡಿದ ನಂತರ, ಎಲ್ಲರ ಅಭಿಪ್ರಾಯ ಪಡೆದು ಮಾತನಾಡಬೇಕು ಎಂದು ಇಷ್ಟು ದಿನ ಸುಮ್ಮನಿದ್ದೇನೆ. ಈ ಬಾರಿ ಶೇಕಡ 20ರಷ್ಟು ಅಲ್ಪಸಂಖ್ಯಾತರ ಮತಗಳು ಸಿಕ್ಕಿವೆ. ಹೋದ ವರ್ಷ ಒಂದು ವೋಟ್ ಸಹ ಸಿಕ್ಕಿರಲಿಲ್ಲ. ಆದರೂ 31 ಸೀಟ್ ಗೆದ್ದಿತ್ತು. ಈ ವರ್ಷ 19 ಯಾಕೆ ಆಯಿತು ಅಂದರೆ, ಜನತಾದಳದ ನಿಜವಾದ ಮತಗಳು ಕಾಂಗ್ರೆಸ್ಸಿಗೆ ಹೋದವು ಅಂತಾ ಹೇಳಿದರು.
ಕುಮಾರಸ್ವಾಮಿ ಅವರು ಹೇಳ್ತಾರೆ ಬಿಜೆಪಿ ಸೋಲಿಸಲು ಮುಸ್ಲಿಂರು ನನಗೆ ವೋಟ್ ಕೊಟ್ಟರು ಅಂತ. ಬಿಜೆಪಿ ಸೋಲಿಸಲೊ, ನಿಮ್ಮನ್ನು ಗೆಲ್ಲಿಸಲೊ ಒಟ್ಟಿನಲ್ಲಿ ವೋಟ್ ಕೊಟ್ಟರಲ್ಲ. ಅದನ್ನು ಒಪ್ಪಿಕೊಂಡರಲ್ಲ. ನಿಮ್ಮ ತೀರ್ಮಾನ ಆಗಿದ್ದರೆ ನಿಮಗೆ ಅಧಿಕಾರವಿದೆ. ಪಕ್ಷದ ತೀರ್ಮಾನ ಅಂತಾದರೆ ಪಕ್ಷದಲ್ಲಿ ಚರ್ಚೆ ಆಗಿ, ಪಕ್ಷದಲ್ಲಿ ಠರಾವು ಆಗಿ ಅದಕ್ಕೆ ಎಲ್ಲರ ಸಹಿ ಆದ ಮೇಲೆ ರಾಜ್ಯಾಧ್ಯಕ್ಷ ನಾನು ಸಹಿ ಹಾಕಬೇಕು.
ಕೋರ್ ಕಮಿಟಿ ಮಾಡಿದೆ. ಅವರು ರಾಜ್ಯದ ತುಂಬಾ ಪ್ರವಾಸ ಮಾಡಿ ಅಭಿಪ್ರಾಯ ತೆಗೆದುಕೊಂಡು ಬರಲಿ ಅಂದವಿ. ಕಮಿಟಿ ಇನ್ನೂ ಪ್ರವಾಸನೇ ಶುರು ಮಾಡಿಲ್ಲ. ನೀವು ಆಗಲೇ ಹೋಗಿ ಭೇಟಿಯಾಗಿ ಬಂದೀರಿ. ಅದು ನನಗೆ ನೋವಾಗಿದೆ ಅಂತಾ ಹೇಳುವ ಮೂಲಕ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಸಿ.ಎಂ ಇಬ್ರಾಹಿಂ ಅಸಮಾಧಾನ ಹೊರ ಹಾಕಿದ್ದಾರೆ.