ಪ್ರಜಾಸ್ತ್ರ ಸುದ್ದಿ
ಸಿಂದಗಿ: ಈ ಬಾರಿಯ ಚುನಾವಣೆಯಲ್ಲಿ ಸಿಂದಗಿ ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಗೆಲುವು ನಿಶ್ಚಿತ. ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನರು ಬೇಸತ್ತಿದ್ದಾರೆ. ಸಿಂದಗಿ ಮತಕ್ಷೇತ್ರಕ್ಕೆ ಕುಮಾರಸ್ವಾಮಿ ಸರ್ಕಾರದಲ್ಲಿ 1,400 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ದೇವೇಗೌಡರ ಕೊಡುಗೆ ಸಹ ತುಂಬಾ ಇದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ ಹೇಳಿದರು.
ಪಟ್ಟಣದ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮುದ್ದೇಬಿಹಾಳ, ಸಿಂದಗಿ, ದೇವರ ಹಿಪ್ಪರಗಿ ಭಾಗದಲ್ಲಿ ಜೆಡಿಎಸ್ ಪರ ಒಲವು ಹೆಚ್ಚಾಗಿದೆ ಎಂದರು. ಇದೇ ವೇಳೆ ಸಂತೋಷ ಹರನಾಳ ಅವರನ್ನು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. ಇದೇ ರೀತಿ ಸಿಂದಗಿ, ಆಲಮೇಲ ಭಾಗದ ವಿವಿಧ ಪದಾಧಿಕಾರಿಗಳ ನೇಮಕದ ಕುರಿತು ಘೋಷಿಸಲಾಯಿತು.
ಮಾಧ್ಯಮಗೋಷ್ಠಿಯನ್ನು ಅವ್ಯವಸ್ಥವಾಗಿ ನಡೆಸಿದಕ್ಕೆ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಶಿಸ್ತುಬದ್ಧವಾಗಿ ನಡೆಸದೆ ಮಾಧ್ಯಮಗೋಷ್ಠಿ ನಡುವೆಯೇ ವೇದಿಕೆ ಮುಂಭಾಗದಲ್ಲಿಯೇ ನೂತನ ಪದಾಧಿಕಾರಿಗಳ ಹೆಸರು ಬರೆದು, ಹೆಸರು ಘೋಷಿಸುವುದು, ಚಪ್ಪಾಳೆ ಹೊಡೆಯುವುದು ನಡೆಯಿತು. ಸರಿಯಾದ ಸಂವಹನ ಇಲ್ಲದ ಕಾರಣಕ್ಕೆ ಮಾಧ್ಯಮಗೋಷ್ಠಿ ಮುಕ್ತಾಯಕ್ಕೂ ಮೊದಲೇ ಪತ್ರಕರ್ತರು ಹೊರಟು ಹೋದರು.
ಈ ವೇಳೆ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ, ಚುನಾವಣಾ ಉಸ್ತುವಾರಿ ಆರ್.ಕೆ ಪಾಟೀಲ, ಆಲಮೇಲ ತಾಲೂಕು ಅಧ್ಯಕ್ಷ ಎಂ.ಎ ಉಸ್ತಾದ, ಕಾಶೀನಾಥ, ಮಹಾಂತೇಶ, ನಾಗಪ್ಪ ಪಾತ್ರೊಟ್ಟಿ ಸೇರಿ ಅನೇಕರು ಉಪಸ್ಥಿತರಿದ್ದರು.