ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯ ಅಧಿಸೂಚನೆ ಹೊರಡಿಸಲು ಉತ್ತರ ಕರ್ನಾಟಕ ಭಾಗದ ರೈತರು ಮಳೆಯನ್ನೂ ಲೆಕ್ಕಿಸದೇ ನ್ಯಾಯಕ್ಕಾಗಿ ಧರಣಿ ನಡೆಸ್ತಿದ್ದು, ಆಳುವ ವರ್ಗದ ಮನಸ್ಥಿತಿ ತೋರಿಸುತ್ತೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಎದುರು ಕೆಲ ಹೋರಾಟಗಾರರು ಮಳೆಯಲ್ಲಿಯೇ ಧರಣಿ ಕುಳ್ತಿರುವುದು ಕಂಡು ಬಂದಿದೆ.
ರಾಜಭವನದ ಒಳಗೆ ರಾಜ್ಯಪಾಲರು ಇದ್ದರೂ ಹೊರಗೆ ಬರದೆ, ಹೋರಾಟಗಾರರ ಕೂಗಿಗೆ ಕಿವಿ ಕೊಡದೆ ಇರೋದು ಈ ನಾಡಿನ ರೈತರ ದುರಂತ ಅಂತಾ ರೈತ ಮುಖಂಡರು ಆಕ್ರೋಶ ಹೊರ ಹಾಕ್ತಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಭರ್ಜರಿಯಾಗಿ ಮಳೆಯಾಗಿದೆ. ಈ ವೇಳೆ ಕೆಲ ಪ್ರತಿಭಟನಾಕಾರರು, ಮಳೆಯನ್ನೂ ಲೆಕ್ಕಿಸಿದೆ ತಾವು ಕುಳಿತ ಜಾಗದಿಂದ ಕದಲಿಲ್ಲ. ಕಳೆದ ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗ್ತಿದೆ. ನ್ಯಾಯಯುತ ಬೇಡಿಕೆಯನ್ನ ಈಡೇರಿಸುವಲ್ಲಿ ಸರ್ಕಾರಗಳು ವಿಫಲವಾಗ್ತಿವೆ ಅಂತಾ ಕಿಡಿ ಕಾರಿದ್ರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ರೈತಪರ ಸಂಘಟನೆ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಹೋರಾಟ ಮಾಡಲಾಗ್ತಿದೆ. ಯಾವೊಬ್ಬ ಜನಪ್ರತಿನಿಧಿ ಇವರ ಬಳಿ ಸುಳಿಯುತ್ತಿಲ್ಲ. ಮಹಾರಾಷ್ಟ್ರಕ್ಕೆ ನೀರು ಬಿಡ್ತೀನಿ ಅನ್ನೋ ಸಿಎಂ, ನಾಡಿನ ರೈತರು ರಾಜಧಾನಿಗೆ ಬಂದು ಮೂರು ದಿನವಾದ್ರೂ ಅವರ ಮಾತನ್ನ ಆಲಿಸಲು ಬರ್ತಿಲ್ಲ ಅಂತಾ ರೈತರು ವಾಗ್ದಾಳಿ ನಡೆಸಿದ್ದಾರೆ.