ಪ್ರಜಾಸ್ತ್ರ ಸುದ್ದಿ
ರಾಯಚೂರು: ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯಲ್ಲಿ ಕಳೆದ ಅಕ್ಟೋಬರ್ 26ರಂದು ಸರ್ಕಾರಿ ಆಸ್ಪತ್ರೆಯ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಮಾಡಿದ್ದರು. ಈ ಸಂಬಂಧ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮೊಹಮ್ಮದ್ ಕೈಫ್, ಸಮೀರ್ ಸೊಹೆಲ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷದ 49 ಸಾವಿರ ರೂಪಾಯಿ ನಗದು, 9 ಲಕ್ಷದ 77 ಸಾವಿರದ 965 ರೂಪಾಯಿ ಮೌಲ್ಯದ 163.34 ಗ್ರಾಂ ಚಿನ್ನದ ಆಭರಣ, 5 ಲಕ್ಷ ಮೌಲ್ಯದ ಕಾರು, 25 ಸಾವಿರ ರೂಪಾಯಿಯ ಬೈಕ್ ಸೇರಿದಂತೆ ಒಟ್ಟು 22 ಲಕ್ಷದ 51 ಸಾವಿರ 965 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮಂಜುಳಾ ಅವರ ಕೊಲೆ ಸಂಬಂಧ ಮಗ ಸಚಿನ್ ಪಾಲ್ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಈ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ದುರಂತವೆಂದರೆ ಕೊಲೆ ಮಾಡಿದ ಆರೋಪಿಗಳು ಸಚಿನ್ ಪಾಲ್ ಸ್ನೇಹಿತರು. ಹಣಕ್ಕಾಗಿ ಇಂತಹ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಕೋರ್ಟಿಗೆ ಒಪ್ಪಿಸಲಾಗಿದೆ.