ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪೊಲೀಸ್ ಠಾಣೆಗೆ ಒಮ್ಮೊಮ್ಮೆ ವಿಚಿತ್ರ ಪ್ರಕರಣಗಳು ಬರುತ್ತವೆ. ಇದೆ ರೀತಿ ಸಿಲಿಕಾನ್ ಸಿಟಿಯಲ್ಲಿ ಯುವಕನೊಬ್ಬ ಮದುವೆ ಮಾಡಿಸಿ ಎಂದು ಪೊಲೀಸರ ಬೆನ್ನು ಬಿದ್ದ ಘಟನೆ ನಡೆದಿದೆ. ಮಣಿಕಂಠ ಅನ್ನೋ ಯುವಕ ತಿಲಕ್ ನಗರ ಠಾಣೆ ಪೊಲೀಸರಿಗೆ ಮದುವೆ ಮಾಡಿಸಿ ಎನ್ನುತ್ತಿದ್ದಾನೆ. ಅಷ್ಟಕ್ಕೂ ಆಗಿದ್ದು ಏನು ಗೊತ್ತಾ?
ತಮಿಳುನಾಡು ಮೂಲದ ಮಣಿಕಂಠ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡು ವರ್ಷದ ಹಿಂದೆ ಪರಿಚಯವಾದ ಕೆ.ಪಿ ಅಗ್ರಹಾರದ ನಿವಾಸಿ ಯುವತಿಯೊಂದಿಗೆ ಪ್ರೀತಿಯಾಗಿದೆ. ಅವಳಿಗಾಗಿ ನಾನು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಮದುವೆ ಆಗೋಣ ಎಂದರೆ ಜಾತಿ ಕಾರಣಕ್ಕೆ ಬಿಟ್ಟು ಹೋಗಿದ್ದಾಳೆ ಎಂದು ಮಣಿಕಂಠ ಅಳಲು ತೋಡಿಕೊಳ್ಳುತ್ತಿದ್ದಾನೆ.
ಪೊಲೀಸರು ಯುವತಿಯ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಇಷ್ಟವಿಲ್ಲದಿದ್ದರೂ ನಮ್ಮ ಹುಡುಗಿಯ ಹಿಂದೆ ಬಿದ್ದಿದ್ದಾನೆ. ಅವಳಿಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥವಾಗಿದೆ. ನಮಗೆ ತೊಂದರೆ ಕೊಡಬೇಡಿ ಎನ್ನುತ್ತಿದ್ದಾರೆ. ಅತ್ತ ಯುವಕ ಆಕೆಯೊಂದಿಗೆ ಮದುವೆ ಮಾಡಿಸಿ ಎನ್ನುತ್ತಿದ್ದಾನೆ. ಒಟ್ಟಿನಲ್ಲಿ ಪ್ರೀತಿ, ಪ್ರೇಮದ ಬಲೆಯಲ್ಲಿ ಬಿದ್ದಿರುವ ಯುವಕ ಈಗ ಬಿಟ್ಟು ಹೋದವಳಿಗಾಗಿ ಒದ್ದಾಡುತ್ತಿದ್ದಾನೆ.