ಪ್ರಜಾಸ್ತ್ರ ಸುದ್ದಿ
ನವದೆಹಲಿ: ಸರ್ಕಾರಿ ಅಧಿಕಾರಿಯಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯ ಭೇಟಿಗೆ ಅವಕಾಶ ನೀಡದೆ ಇರುವುದಕ್ಕೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಧರಣಿ ನಡೆಸುತ್ತಿದ್ದಾರೆ.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಸೋಮವಾರದಿಂದ ಧರಣಿ ನಡೆಸಿದ್ದಾರೆ. ಬಾಲಕಿ ಹಾಗೂ ಆಕೆಯ ಕುಟುಂಬಸ್ಥರನ್ನು ಭೇಟಿಯಾಗದಂತೆ ತಡೆಯಲಾಗಿದೆ ಎಂದು ಇಂದು ಸಹ ಧರಣಿ ಮುಂದುವರೆಸಿದ್ದಾರೆ. ನಿನ್ನೆ ರಾತ್ರಿಯೂ ಇಲ್ಲೆ ಕಳೆದಿದ್ದೇನೆ. ಪೊಲೀಸರು ಬಾಲಕಿಯ ಭೇಟಿಗೆ ಯಾಕೆ ಅವಕಾಶ ನೀಡುತ್ತಿಲ್ಲ ಗೊತ್ತಿಲ್ಲ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮೋದಯ್ ಖಾಖಾ ಬಾಲಕಿಯ ಮೇಲೆ ನವೆಂಬರ್ 2020 ಹಾಗೂ ಜನವರಿ 21ರ ನಡುವೆ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಗರ್ಭಪಾತಕ್ಕೆ ಆತನ ಪತ್ನಿ ಔಷಧಿ ನೀಡಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರೇಮೋದಯ್ ಹಾಗೂ ಆತನ ಪತ್ನಿ ಸೀಮಾ ರಾಣಿಯನ್ನು ಬಂಧಿಸಲಾಗಿದೆ.