ನವದೆಹಲಿ: ವಿಚಾರವಾದಿ, ಖ್ಯಾತ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ, ನ್ಯಾಯಾಧೀಶರ ನೇತೃತ್ವದ ತನಿಖೆ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಕಲಬುರ್ಗಿ ಪತ್ನಿ ಉಮಾದೇವಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ಈ ರೀತಿ ಇತ್ಯರ್ಥ ಪಡಿಸಿದೆ.
ಪ್ರಕರಣವನ್ನ ಈಗಾಗ್ಲೇ ವಿಶೇಷ ತನಿಖಾ ತಂಡ ನಡೆಸುತ್ತಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ ಚಾರ್ಜ್ ಶೀಟ್ ನ್ನ ಕೋರ್ಟ್ ಗೆ ಸಲ್ಲಿಸಿದ್ದಾರೆ. ಅಲ್ದೇ, ತನಿಖೆ ಸಹ ಪೂರ್ಣಗೊಂಡಿದೆ. ಹೀಗಿರುವಾಗ ನ್ಯಾಯಾಧೀಶರ ನೇತೃತ್ವದ ತನಿಖೆಯ ಅಗತ್ಯವಿಲ್ಲವೆಂದು, ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಪೀಠ ಅರ್ಜಿಯನ್ನ ಇತ್ಯರ್ಥ ಪಡಿಸಿದೆ.
ಪೊಲೀಸ್ರು ಚಾರ್ಜ್ ಶೀಟ್ ಸಲ್ಲಿಸಿರುವ ವರದಿ ಪ್ರಕಾರ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅದರ ತನಿಖೆಯನ್ನ ನಡೆಸಲಾಗ್ತಿದೆ. ಸೆಷನ್ ಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯಲಿದೆ ಎಂದು ಇದೆ ವೇಳೆ ತಿಳಿಸಲಾಗಿದೆ.