ಪ್ರಜಾಸ್ತ್ರ ಅಪರಾಧ ಸುದ್ದಿ
ಸಿಂದಗಿ: ತಾಲೂಕಿನ ಬೂದಿಹಾಳ ಪಿ.ಎಚ್ ಹಾಗೂ ಓತಿಹಾಳ ರಸ್ತೆಯ ಹತ್ತಿರ ಅಕ್ಕ ಹಾಗೂ ತಮ್ಮನನ್ನು ಕೊಲೆ ಮಾಡಲಾಗಿದೆ. ರಾಜಶ್ರೀ ಹಾಗೂ ಸಹೋದರ ನಾನಾಗೌಡ ಕೊಲೆಯಾದ ದುರ್ದೈವಿಗಳು.
ದೇವರನಾವದಗಿ ಮೂಲದ ರಾಜಶ್ರೀ ಹಾಗೂ ಬೂದಿಹಾಳ ಪಿ.ಎಚ್ ಮೂಲದ ಶಂಕರಗೌಡನ ಜೊತೆಗೆ ಸುಮಾರು 15 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿದೆ. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಆರಂಭದಿಂದಲೂ ಗಂಡ ಹೆಂಡ್ತಿ ನಡುವೆ ಜಗಳ ನಡೆದುಕೊಂಡು ಬಂದಿದೆ. ಹೀಗಾಗಿ ಮಹಿಳೆ ತವರು ಮನೆಗೆ ಬಂದು ಹೋಗುತ್ತಿದ್ದಳು.
ಇದೆ ರೀತಿ ಕಳೆದ 15 ದಿನಗಳ ಹಿಂದೆ ತವರುಮನೆಗೆ ಬಂದಿದ್ದ ರಾಜಶ್ರೀ, ಮಕ್ಕಳ ಶಾಲೆಯ ವರ್ಗಾವಣೆ ಪತ್ರವನ್ನು ತೆಗೆದುಕೊಂಡು ಬರಲು ತಮ್ಮನೊಂದಿಗೆ ಬಂದಿದ್ದಾಳೆ. ಅದು ಇವರಿಗೆ ಮೃತ್ಯುವಾಗಿದೆ. ಬೈಕ್ ಮೇಲೆ ತೆರಳುತ್ತಿದ್ದಾಗ ಹಿಂದಿನಿಂದ ಮತ್ತೊಂದು ಬೈಕ್ ನಲ್ಲಿ ಬಂದ ಮಹಿಳೆ ಪತಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಅವರು ಕೆಳಗೆ ಬೀಳುತ್ತಿದ್ದಂತೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಮಗಳು ಹಾಗೂ ಮಗನನ್ನು ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಅತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು ಸ್ಥಿತಿ ಯಾರಿಗೂ ಬೇಡವಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ನೀರವಮೌನ ಆವರಿಸಿಕೊಂಡಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.