ಪಾಂಡವಪುರ: ಕಥೆ, ಕವಿತೆ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಆಸಕ್ತಿಯ ಜೊತೆಗೆ ಸ್ವಂತಿಕೆ ಇರಬೇಕು. ಸಮಾಜದ ಎಲ್ಲ ಆಗು ಹೋಗುಗಳಿಗೆ ಸ್ಪಂದಿಸುವ ಗುಣವಿರಬೇಕು. ಸತತ ಅಧ್ಯಯನದ ಪರಿಶ್ರಮ ಇರಬೇಕು. ಅಂದಾಗ ಸಾಹಿತ್ಯ ಒಲಿಯುತ್ತೆ. ಇಂಥಾ ಸಾಹಿತ್ಯದ ಬೆನ್ನು ಬಿದ್ದು, ತನ್ನ ಬದುಕಿಗೆ ಆಸರೆಯಾಗಿದ್ದ ಹಸುಗಳನ್ನ ಮಾರಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ರೈತಕವಿ ಪ್ರಕಾಶ ಬೇವಿನಕುಪ್ಪೆ ಅವರು, ಸುಮಾರು 15 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ದನ ಮೇಯಿಸಿಕೊಂಡು, ಅಕ್ಷರದ ಅಕ್ಕರೆಯನ್ನ ಹೊಂದಿರುವ ಪ್ರಕಾಶ, ಕನ್ನಡದ ತೇರು, ರೈತನ ಬದುಕು, ನಗುವೇ ಮಾಣಿಕ್ಯ ಅನ್ನೋ 3 ಕೃತಿಗಳನ್ನ ರಚನೆ ಮಾಡಿದ್ದಾರೆ.
ಕೃತಿ ಪ್ರಕಟಣೆಗೆ ರಾಜಕೀಯ ನಾಯಕರ ಬಳಿ ಆರ್ಥಿಕ ನೆರವು ಕೇಳಿದ್ದು, ಅವರು ಹಣ ಕೊಡುವುದಕ್ಕೆ ಹಿಂದೆಮುಂದೆ ನೋಡಿದಾಗ, ಜೀವನಕ್ಕೆ ಆಧಾರವಾಗಿದ್ದ 2 ಹಸುಗಳನ್ನ ಮಾರಿ ಪುಸ್ತಕ ಪ್ರಕಟಿಸಿದ್ದಾರೆ. ಸಾಹಿತ್ಯವೂ ಒಂದು ಉದ್ಯಮವಾಗಿದ್ದು, ವ್ಯವಸ್ಥಿತ ವಲಯದಲ್ಲಿ ಪ್ರಕಟಣೆಗೊಂಡಾಗ ಅದಕ್ಕೆ ಪ್ರಚಾರ ಸಿಗುತ್ತೆ. ಒಂದಿಷ್ಟು ಹಣ ಬರುತ್ತೆ. ಆದ್ರೆ, ಪ್ರಕಾಶನ, ಪ್ರಕಟಣೆ, ಮಾರಾಟ, ಬಗ್ಗೆ ಏನೂ ಗೊತ್ತಿಲ್ಲದೆ, ಪುಸ್ತಕ ಪ್ರಕಟಣೆಯ ಹುಚ್ಚಿಗೆ ಬಿದ್ದು ಇದೀಗ ಕಷ್ಟ ಅನುಭವಿಸ್ತಿದ್ದಾರೆ.
ಸ್ವಂತ ಜಮೀನೂ ಇಲ್ಲ. ಇರೋ ಹಸುಗಳನ್ನ ಮಾರಲಾಗಿದೆ. ರೈತಕವಿ, ಉಲ್ಟಾ ಸಿಂಗರ್ ಅನ್ನೋ ಹೆಸರು ಕೆಲ ಮೀಡಿಯಾಗಳಲ್ಲಿ ಆ ಕ್ಷಣಕ್ಕೆ ಸುದ್ದಿಯಾಗಿ ಹೋಗಿದೆ. ಈಗ ಬದುಕು ನಡೆಸಲು ಹಣದ ಅವಶ್ಯಕತೆಯಿದ್ದು, ಸಹಾಯದ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡುವವರು ಪ್ರಕಾಶ ಅವರ ಮೊಬೈಲ್ ನಂಬರ್ ಗೆ 8861485857 ಸಂಪರ್ಕಿಸಬಹುದು.