ಪ್ರಜಾಸ್ತ್ರ ಸುದ್ದಿ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸಹ ಕರೋನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನ ಕಂಟ್ರೋಲ್ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡ್ತಿರುವ ಪ್ರಯತ್ನವನ್ನ ಕಾಳಸಂತೆಯ ದಂಧೆಕೋರರು ವಿಫಲ ಮಾಡ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ರೆಮ್ ಡಿಸಿವರ್ ಗಾಗಿ ರೋಗಿಗಳು ಸಂಬಂಧಿಕರು ಪರದಾಟ ನಡೆಸಿದ್ದಾರೆ.
ಜನರು ರೆಮ್ ಡಿಸಿವರ್ ಸಿಗುತ್ತಿಲ್ಲವೆಂದು ಕಂಗಾಲಾಗಿದ್ದಾರೆ. ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಕೈ ಚೆಲ್ಲಿದೆ. ಸರ್ಕಾರಿ ಅಧಿಕಾರಿಗಳು ತಮಗೇನೂ ಗೊತ್ತೇ ಇಲ್ಲ ಅನ್ನೋ ರೀತಿ ವರ್ತಿಸ್ತಿದ್ದಾರೆ. ಹೀಗಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ಕೆಲವು ಸಿಬ್ಬಂದಿಯೇ ರೆಮ್ ಡಿಸಿವರ್ ಅಕ್ರಮ ಮಾರಾಟದಲ್ಲಿ ತೊಡಗಿಕೊಂಡಿದೆ.
ಜಿಲ್ಲೆಯಲ್ಲಿ ಅಕ್ರಮ ರೆಮ್ ಡಿಸಿವರ್ ಮಾರಾಟ ಮಾಡುವವರ ಜಾಲ ದೊಡ್ಡದಾಗಿದ್ದು, ಮೇಲಿಂದ ಮೇಲೆ ಪೊಲೀಸರ ಕೈಗೆ ಸಿಕ್ಕು ಬೀಳ್ತಿದ್ದಾರೆ. ಆದ್ರೂ, ಕಾಳಸಂತೆಯ ಕಿಲಾಡಿಗಳಿಗೆ ಭಯವಿಲ್ಲ. ಯಾವ ಪೊಲೀಸ್, ಯಾವ ಕಾನೂನು ನಮ್ಗೆ ಏನೂ ಮಾಡುವುದಿಲ್ಲ ಅನ್ನೋ ರೀತಿ ವರ್ತಿಸ್ತಿದ್ದಾರೆ.
ವೈದ್ಯರು ಅಂದರೆ ದೇವರು ಅಂದುಕೊಂಡಿದ್ದೀವಿ. ಇದೀಗ ಅವರೆಲ್ಲ ನರಭಕ್ಷಕರಾಗಿದ್ದಾರೆ. ಜನಪ್ರತಿನಿಧಿಗಳು ಜಿಲ್ಲಾಧಿಕಾರಿಯಿಂದ ಹಿಡಿದು ರೆಮ್ ಡಿಸಿವರ್ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಎಲ್ಲರೂ ಭ್ರಷ್ಟರಾಗಿದ್ದಾರೆ. 8 ತಾಲೂಕು ಇರುವ ಜಿಲ್ಲೆಯಲ್ಲಿ ಕೇವಲ 15-20 ರೆಮ್ ಡಿಸಿವರ್ ಇಂಜಕ್ಷನ್ ಬರ್ತವೆ ಅಂದರೆ ನಂಬೋದು ಹೇಗೆ? ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ರೆಮ್ ಡಿಸಿವರ್ ಅಕ್ರಮ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರೂ ಡಿಸಿ, ಎಸ್ಪಿ ಏನು ಮಾಡ್ತಿದ್ದಾರೆ ಗೊತ್ತಿಲ್ಲ.
ಸಂತೋಷ ಪೂಜಾರಿ, ದಲಿತ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದ್ರೆ ಜನರು ಬೀದಿ ಬೀದಿಯಲ್ಲಿ ಹೆಣವಾಗಬೇಕಾಗುತ್ತೆ. ಕುಟುಂಬದ ಸದಸ್ಯರನ್ನ ಕಳೆದುಕೊಂಡ ಜನರ ಕಣ್ಣೀರು, ನೋವು, ಸಂಕಟದ ಬಿಸಿ ಒಂದಲ್ಲ ಒಂದು ದಿನ ತಟ್ಟದೆ ಇರೋದಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.