ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ: ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ಹೀಗಾಗಿ ಮದ್ಯಮುಕ್ತ ಗ್ರಾಮಕ್ಕೆ ಆಗ್ರಹಿಸಿ ತಾಲೂಕಿನ ಚಟ್ನಳ್ಳಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸ್ವಸಹಾಯ ಮಹಿಳಾ ಸಂಘ, ಕರ್ನಾಟಕ ಅಂಬೇಡ್ಕರ್ ಸೇನೆ, ಗ್ರಾಮ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಗ್ರಾಮದ ಯುವ ಮುಖಂಡ ಶರಣಗೌಡ ಪಾಟೀಲ, ದಲಿತ ಪರ ಸಂಘಟನೆಯ ಮುಖಂಡ ರಾವುತ ತಳಕೇರಿ ಹಾಗೂ ಮಹಿಳೆಯರು ಮಾತನಾಡಿ, ಗ್ರಾಮದಲ್ಲಿ ಸಂಜೆಯಿಂದ ರಾತ್ರಿವರೆಗೆ ಕುಡುಕರ ಹಾವಳಿ ಹೆಚ್ಚಾಗಿದೆ. ಮಹಿಳೆಯರು ಮಕ್ಕಳು ನೆಮ್ಮದಿಯಿಂದ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರಾಯಿಮುಕ್ತ ಗ್ರಾಮ ಮಾಡಬೇಕೆಂದು ಆಗ್ರಹಿಸಿದರು.
ಕಿರಾಣಿ, ಚಹಾ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಶಿರಸ್ತೇದಾರ್ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯೆ ತನುಶ್ರೀ ಶರಣಗೌಡ ಪಾಟೀಲ, ಮುಖಂಡರಾದ ರಮೇಶ ಚಲವಾದಿ, ಬೈರಡ್ಡಿ ಹದನೂರ, ಶಂಕರಲಿಂಗ ಪೂಜಾರಿ, ಸಂಜು ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.