ಕೊಚ್ಚಿ: ಮಲೆಯಾಳಂ ಹಿರಿಯ ಸಾಹಿತಿ ಅಚ್ಯುತನ್ ನಂಬೂದರಿ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಅಕ್ಕಿತಂ ಕಾವ್ಯನಾಮದಿಂದಲೇ ಖ್ಯಾತಿಯನ್ನ ಗಳಿಸಿರುವ ಶ್ರೀಯುತರಿಗೆ ಸಾಹಿತ್ಯ ಕ್ಷೇತ್ರದ ಮೇರು ಪ್ರಶಸ್ತಿಯನ್ನ ಶುಕ್ರವಾರ ಸಂಜೆ ಘೋಷಣೆ ಮಾಡಲಾಗಿದೆ.
ಕೇರಳದ ಪಲಕ್ಕಾಡ್ ನಲ್ಲಿ ಮಾರ್ಚ್ 18, 1926ರಲ್ಲಿ ಜನಿಸಿರುವ ಅಚ್ಯುತನ್ ನಂಬೂದರಿ ಅವರಿಗೆ ಇದೀಗ 93ರ ಇಳಿ ವಯಸ್ಸು. ಕಾವ್ಯ, ನಾಟಕ, ಸಣ್ಣಕತೆ, ಅನುವಾದ ಹಾಗೂ ವಿಮರ್ಶೆ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಅಕ್ಕಿತಂ ಅವರಿಗೆ 55ನೇ ಜ್ಞಾನಪೀಠ ಪ್ರಶಸ್ತಿ ಸಂದಿದೆ.
ಹಿರಿಯ ಸಾಹಿತಿಗೆ ಈ ಮೊದಲು ಭಾರತ ಸರ್ಕಾರದಿಂದ ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ(1973), ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ(1972 ಮತ್ತು 1988), ಕಬೀರ್ ಸಮ್ಮಾನ್, ಮಾತೃಭೂಮಿ ಪ್ರಶಸ್ತಿ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರನ್ನ ಹುಡುಕಿಕೊಂಡು ಬಂದಿವೆ. ಇದೀಗ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ನಡೆದಿದೆ. ಪ್ರಜಾಸ್ತ್ರ ಕಡೆಯಿಂದಲೂ ಅಕ್ಕಿತಂ ಅವರಿಗೆ ಅಭಿನಂದನೆಗಳು.