ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸಂಕ್ರಮಣದ ನಂತರ ನಡೆಯುವ ಪಟ್ಟಣದ ಐತಿಹಾಸಿಕ ಸಂಗಮೇಶ್ವರ ಜಾತ್ರೆ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಸೇರಿದಂತೆ ಇತರರು ತೇರಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ನಂತರ ಭಕ್ತರು ಹಗ್ಗವನ್ನು ಎಳೆದ ಬೃಹತ್ ತೇರನ್ನು ಹಳೆ ಬಜಾರದಲ್ಲಿರುವ ಬಸವಣ್ಣ ದೇವರ ಗುಡಿಯ ತನಕ ತೆಗೆದುಕೊಂಡು ಹೋದರು.
ಬೃಹತ್ ತೇರಿನಲ್ಲಿ ಸಂಗಯ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಪಲ್ಲಕ್ಕಿ, ಪುರವಂತರು ಸೇರಿದಂತೆ ವಿವಿಧ ಕಲಾ ತಂಡಗಳು ತೇರಿನೊಂದಿಗೆ ಹೆಜ್ಜೆ ಹಾಕಿದವು. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ವಿಜೃಂಭಣೆಯ ಜಾತ್ರೆ ನೆರವೇರಿಸಲು ಆಗಿರಲಿಲ್ಲ. ಸಂಪ್ರದಾಯ ಬಿಡಬಾರದಂದು ದೇವಸ್ಥಾನದ ಮುಂಭಾಗದಲ್ಲಿ ತೇರು ಎಳೆದು ಸರಳವಾಗಿ ಜಾತ್ರೆ ನಡೆಸಲಾಗಿತ್ತು.
ಈ ಬಾರಿ ಸಂಗಯ್ಯನ ಜಾತ್ರೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದೆ. ಸಂಜೆಯವರೆಗೂ ತೇರು ದೇವಸ್ಥಾನದ ಹೊರಗೆ ಇರಿಸಲಾಗುತ್ತೆ. ಭಕ್ತರು ತೇರಿಗೆ ತಂಗಿನ ಕಾಯಿ ಒಡೆದು, ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ.