ಪ್ರಜಾಸ್ತ್ರ ಸುದ್ದಿ
ಬೆಂಗಳೂರು: 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುತ್ತಿದೆ. ಒಂದಿಷ್ಟು ವಿರೋಧ, ಅಸಮಾಧಾನದ ನಡುವೆಯೂ ಶಿಕ್ಷಣ ಇಲಾಖೆ ಮೂರು ಬಾರಿ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದಾರೆ.
ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುತ್ತಿತ್ತು. ಅದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕ ಪಟ್ಟಿಯಲ್ಲಿ ಎರಡನೇ ಬಾರಿಗೆ ಉತ್ತೀರ್ಣರಾದ ವಿಷಯಗಳ ಮುಂದೆ ಸ್ಟಾರ್ ಸಂಕೇತ ಬರುತ್ತಿತ್ತು. ಆದರೆ, ಇನ್ನು ಮುಂದೆ ಹಾಗೇ ಇಲ್ಲ ಎನ್ನುತ್ತಾರೆ ಶಿಕ್ಷಣ ಸಚಿವರು.
ಲಾಂಗ್ ಜಂಪ್ ನಲ್ಲಿ ಎರಡು, ಮೂರು ಬಾರಿ ಅವಕಾಶ ನೀಡುವಂತೆ ಪರೀಕ್ಷೆಯಲ್ಲಿ ಮೂರು ಅವಕಾಶಗಳನ್ನು ನೀಡಲಾಗುತ್ತಿದೆ. ಅಂಕ ಪಟ್ಟಿಯಲ್ಲಿಯೂ ಫೇಲ್ ಆದರು ಎಂದು ಬರಬಾರದು ಅಂತ ಮೂರು ಬಾರಿಯೂ ಪ್ರಮುಖ ಪರೀಕ್ಷೆ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಶಿಕ್ಷಕರು ವಿರೋಧ ಮಾಡಿದ್ದರೂ ಸರ್ಕಾರ ಕ್ಯಾರೆ ಅಂದಿಲ್ಲ. ಈಗ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿ ಮಾಡುವುದರಿಂದ ಓದಿನ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ಪರೀಕ್ಷೆ ಮೌಲ್ಯಮಾಪನ ಮಾಡುವುದು ಕಷ್ಟವಾಗುತ್ತೆ ಎನ್ನುವ ಮಾತುಗಳು ಕೇಳಿ ಬಂದಿವೆ.