ಸಿಂದಗಿ: ಪಟ್ಟಣದ ಪುರಸಭೆ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಅನಿಸುತ್ತೆ. ಹೀಗಾಗಿ ಬೇಕಾಬಿಟ್ಟಿಯಾಗಿ ಕೆಲಸ ಮಾಡ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಬೀದಿ ವ್ಯಾಪಾರಸ್ಥರ ಸಂಘಕ್ಕೆ ನಡೆದ ಎಲೆಕ್ಷನ್ ಟೈಂನಲ್ಲಿಟ್ಟ ಠೇವಣಿ ಹಣ ಕೊಡಲು ಸಹ ಸಬೂಬು ಹೇಳ್ತಾ ಸರ್ವಾಧಿಕಾರಿಗಳಂತೆ ನಡೆದುಕೊಳ್ತಿದ್ದಾರೆ.
ಕಳೆದ ಡಿಸೆಂಬರ್ 11ರಂದು ಬೀದಿ ವ್ಯಾಪಾರಸ್ಥರ ಸಂಘಕ್ಕೆ ಚುನಾವಣೆ ನಡೆದಿದೆ. ಈ ವೇಳೆ ಠೇವಣಿ ರೂಪದಲ್ಲಿ 20 ಸಾವಿರ ರೂಪಾಯಿ ಇರಿಸಿಕೊಳ್ಳಲಾಗಿದೆ. ಬಳಿಕ ಅವಿರೋಧವಾಗಿ ಆಯ್ಕೆಯಾದ 10 ಜನ ಸದಸ್ಯರು ಠೇವಣಿ ಹಣ ವಾಪಸ್ ನೀಡಿಯೆಂದು ಕಳೆದ ಒಂದು ತಿಂಗಳಿಂದ ಪುರಸಭೆಗೆ ಅಲೆದಾಡ್ತಿದ್ದಾರೆ. ಆದ್ರೆ, ಇಲ್ಲಿನ ಅಧಿಕಾರಿಗಳು ಮಾತ್ರ ಇಲ್ಲಸಲ್ಲದ ಕಾರಣಗಳನ್ನ ನೀಡ್ತಾ ಅವರಿಗೆ ಸುಖಾಸುಮ್ಮನೆ ಅಲೆಯುವಂತೆ ಮಾಡ್ತಿದ್ದಾರೆ.
ಬೀದಿ ವ್ಯಾಪಾರಸ್ಥ ಸಂಘದ ಸದಸ್ಯರಿಗೆ ನೀಡಬೇಕಾದ ಠೇವಣಿ ಹಣದ ಕುರಿತು, ಇದಕ್ಕೆ ಸಂಬಂಧಿಸಿದ ನಲ್ಮ್ ಯೋಜನೆಯ ಅಧಿಕಾರಿ ಸರೋಜಿನಿ ಬಸವರಾಜ ಅವರನ್ನ ಕೇಳಿದ್ರೆ ನಾನು ಜನವರಿ 1ಕ್ಕೆ ಅಕೌಂಟ್ ವಿಭಾಗಕ್ಕೆ ಕೊಟ್ಟಿದ್ದೇನೆ. ಅದೇನಾಗಿದೆ ನನ್ಗೆ ಗೊತ್ತಿಲ್ಲವೆಂದು ಹೇಳ್ತಾರೆ. ಬಳಿಕ ಅಕೌಂಟೆಂಟ್ ಅರ್ಷಿಯಾನಾನಾಜ ಅವರನ್ನ ಕೇಳಿದ್ರೆ, ಚೆಕ್ ಬುಕ್ ಖಾಲಿಯಾಗಿದೆ. ಹೀಗಾಗಿ ಬ್ಯಾಂಕ್ ಗೆ ಆರ್ಡರ್ ಕೊಟ್ಟಿದ್ದು, ಅವರು 10 ದಿನ ಟೈಂ ಆಗುತ್ತೆ ಎಂದು ಹೇಳಿದ್ದಾರೆ ಅಂತಾ ಹೇಳ್ತಿದ್ದಾರೆ.
ಅಕೌಂಟೆಂಟ್ ಅರ್ಷಿಯಾನಾಜ ಅವರೇ ಹೇಳುವಂತೆ ಯೂನಿಯನ್ ಬ್ಯಾಂಕ್ ಜೊತೆ ಪುರಸಭೆ ವ್ಯವಹಾರ ನಡೆಸಿ 6 ತಿಂಗಳಾಗಿದೆ ಅಂತೆ. ಈಗ ಚೆಕ್ ಬುಕ್ ಗೆ ಆರ್ಡರ್ ಕೊಟ್ಟಿದ್ದೇವೆ. ನೀವೇ ಬೇಕಾದ್ರೆ ಬ್ಯಾಂಕ್ ಗೆ ಹೋಗಿ ಕೇಳಿ. ನಮಗ್ಯಾಕೆ ಕಿರಿಕಿರಿ ಮಾಡ್ತೀರಿ ಅಂತಾ ಬಾಯಿಗೆ ಬಂದಂತೆ ಮಾಡ್ತಿದ್ದಾರೆ ಎಂದು ಬೀದಿ ವ್ಯಾಪಾರಸ್ಥರ ಸಂಘದ ಸದಸ್ಯ ಅಬೂಬಕರ ಡೋಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಠೇವಣಿ ಹಣ ನಮ್ಗೆ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ಅಕೌಂಟೆಂಟ್ ಅರ್ಷಿಯಾನಾಜ ಅವರು ಇಲ್ಲ ಸಲ್ಲದ ನೆಪ ಹೇಳ್ತಿದ್ದಾರೆ. ಅಲ್ದೇ, ಮರ್ಯಾದೆ ಕೊಟ್ಟು ಮಾತ್ನಾಡದೆ ಜೋರು ಧ್ವನಿಯಲ್ಲಿ ಬಾಯಿಗೆ ಬಂದಂತೆ ಮಾತ್ನಾಡಿ ಬೇಕಾದ್ರೆ ನೀವೇ ಬ್ಯಾಂಕ್ ಗೆ ಹೋಗಿ ಅಂತಾ ಹೇಳ್ತಿದ್ದಾರೆ ಎಂದು ಸೂರಯ್ಯ ಗೋಳಸಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳಿಂದ ನಮ್ಮ ಠೇವಣಿ ರೊಕ್ಕ ನಮ್ಗೆ ಕೊಡ್ತಿಲ್ಲರಿ. ದಿನಾ ಮುನ್ಸಿಪಾಟಿಗೆ ಬಂದು ಚಪ್ಲಿ ಹರಿದಾವ. ಅಕೌಂಟೆಂಟ್ ಮೇಡಂ ನಮ್ಗ ಕಿಮ್ಮತ್ ಕೊಡದೆ ಬಾಯಿಗೆ ಬದ್ದಂತೆ ಮಾತ್ನಾಡ್ತಾರಿ. ನಾವು 10 ಜನ ಸದಸ್ಯರು ಡಿಸಿ ಅವರ ಬಳಿ ಹೋಗ್ತೀವ್ರಿ.
ಅಬೂಬಕರ ಡೋನಿ, ಸದಸ್ಯರು, ಬೀದಿ ವ್ಯಾಪಾರಸ್ಥರ ಸಂಘ
ಇದು ಪುರಸಭೆಯಲ್ಲಿನ ಅಧಿಕಾರಿಗಳ ದರ್ಬಾರ್ ಆಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದೆ ಅಧಿಕಾರದ ಅಮಲಿನಲ್ಲಿ ಬಾಯಿಗೆ ಬದ್ದಂತೆ ಮಾತ್ನಾಡ್ತಿದ್ದಾರೆ. ನಾವು ಠೇವಣಿ ಇಟ್ಟಿದ್ದು ಪುರಸಭೆಯಲ್ಲಿ. ಬ್ಯಾಂಕ್ ಗೆ ಹೋಗಿ ಕೇಳಿ ಅಂದ್ರೆ ಹೇಗೆ ಅಂತಾ ಬೀದಿ ವ್ಯಾಪಾರಸ್ಥರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸರಸ್ವತಿ ಬ್ಯಾಡರ, ಬಂದೇನವಾಜ, ವಹೀದ ಭಾಗವಾನ, ಝಾಕೀರ ಭಾಗವಾನ, ಗಾಲಿಬ ಗೋಳಸಾರ ಸೇರಿದಂತೆ ಅನೇಕರು ಭಾಗವಹಿಸಿದ್ರು.