ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ವಿಷ್ಯ ಟಿಪ್ಪು ಸುಲ್ತಾನ್ ವಿಚಾರ. ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತಾದ ಇತಿಹಾಸವನ್ನ ತೆಗೆದು ಹಾಕುವುದಾಗಿ ರಾಜ್ಯ ಬಿಜೆಪಿ ಸರ್ಕಾರ ಹೇಳ್ತಿದೆ. ಈ ಸಂಬಂಧ ನಾಳೆ ಶಿಕ್ಷಣ ಸಚಿವ ಸುರೇಶಕುಮಾರ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಶೀಲನಾ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಟಿಪ್ಪು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಪಠ್ಯ ಪುಸ್ತಕದಲ್ಲಿ ಟಿಪ್ಪು ಇತಿಹಾಸ ತೆಗೆಯಬೇಕೋ ಬೇಡ್ವೋ ಅನ್ನೋ ಕುರಿತು ಚರ್ಚೆ ನಡೆಯಲಿದ್ದು, ಇಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಟಿಪ್ಪು ಜಯಂತಿಯನ್ನ ರದ್ದುಗೊಳಿಸಿ ಸಿಎಂ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಪುಸ್ತಕದಿಂದ ಟಿಪ್ಪು ವಿಷಯ ತೆಗೆಯುವ ಚಿಂತನೆ ನಡೆಸಿದೆ. ಈಗಾಗ್ಲೇ ಈ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಪರ-ವಿರೋಧಗಳ ಚರ್ಚೆ ನಡೆಯುತ್ತಿವೆ. ಕಾಂಗ್ರೆಸ್ ಇದನ್ನ ತೀವ್ರವಾಗಿ ವಿರೋಧಿಸಿದೆ. ಹೀಗಾಗಿ ನಾಳೆ ನಡೆಯುವ ಪರಿಶೀಲನಾ ಸಭೆ ಏನಾಗಲಿದೆ ಅನ್ನೋ ಕುತೂಹಲ ಮೂಡಿದೆ.