ಮುಂಬೈ: ಆಂಧ್ರದ ವಿಶಾಖಪಟ್ಟಣಂದಲ್ಲಿ ನಡೆದ ವಿಷಅನಿಲ ದುರಂತ ಮಾಸುವ ಮೊದ್ಲೇ ಇಂದು ಮತ್ತೊಂದು ದುರಂತ ಸಂಭವಿಸಿದೆ. ರೈಲು ಹಳಿಗಳ ಮೇಲೆ ಮಲಗಿದ್ದವರ ಮೇಲೆ ರೈಲು ಹಾಯ್ದು ಹೋಗಿದೆ. ಇದ್ರಿಂದಾಗಿ ಬರೋಬ್ಬರಿ 15ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಸುಮಾರು 5.30ರ ಟೈಂನಲ್ಲಿ ಔರಂಗಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರದೇಶಕ್ಕೆ ಹೊರಟಿದ್ದ ವಲಸೆ ಕಾರ್ಮಿಕರ ಮೇಲೆ ಕಾರ್ಗೋ ಗೂಡ್ಸ್ ರೈಲು ಹರಿದು ಭೀಕರ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೋನಾ ಲಾಕ್ ಡೌನ್ ನಿಂದಾಗಿ ಸಮಸ್ಯೆ ಎದುರಿಸ್ತಿರುವ ಕಾರ್ಮಿಕರಿಗೆ ಇತ್ತೀಚೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ರೂ ನಡೆದುಕೊಂಡು ಹೋಗ್ತಿರುವುದು ನಿಂತಿಲ್ಲ. ಅದೇ ರೀತಿ ನಡೆದುಕೊಂಡು ಹೋಗ್ತಿದ್ದಾಗ ರಾತ್ರಿ ಮಹಾರಾಷ್ಟ್ರದ ಕಾರ್ಮಾಡ್ ಬಳಿಯ ರೈಲು ಹಳಿಗಳ ಮೇಲೆ ಮಲಗಿದ್ದೇ ಇಷ್ಟೊಂದು ಅನಾಹುತಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.