ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕರೋನಾ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಲಾಕ್ ಡೌನ್ ಸೃಷ್ಟಿಸಿದ ಭಯಾನಕತೆ ನೆನೆದುಕೊಂಡರೂ ಜನರಲ್ಲಿ ಈಗ್ಲೂ ಭಯವಾಗುತ್ತೆ. ಹೀಗಿರುವಾಗ ಇದೀಗ ಓಮಿಕ್ರಾನ್ ಹೆಸರಿನಲ್ಲಿ ಮತ್ತೆ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಸೆಮಿ ಲಾಕ್ ಡೌನ್ ಶುರುವಾಗುತ್ತಿವೆ.
ವಿಶ್ವದಲ್ಲಿಯೇ ಅತಿ ವೇಗವಾಗಿ 100 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ ಎಂದು ತನ್ನ ಭುಜವನ್ನು ತಾನೇ ತಟ್ಟಿಕೊಂಡಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇದೀಗ ದೇಶದಲ್ಲಿ ಮತ್ತೆ ಭಯ ಸೃಷ್ಟಿಸುತ್ತಿವೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರ ಮೇಲೆ ಮತ್ತೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಕೋವಿಡ್ ವಿಚಾರದಲ್ಲಿ ಸರ್ಕಾರ ಮತ್ತೆ ವಿಫಲವಾಗುತ್ತಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಶಾಲಾ, ಕಾಲೇಜುಗಳನ್ನು ಗುರುವಾರದಿಂದ ಬಂದ್ ಮಾಡುತ್ತಿದೆ. ಕಟ್ಟು ನಿಟ್ಟಿನ ಕ್ರಮವೆಂದು ಹೇಳಿ ವಾರಾಂತ್ಯದ ಕರ್ಫ್ಯೂ ಮೂಲಕ ಮತ್ತೆ ಕಳ್ಳ ದಂಧೆಗೆ ದಾರಿ ಮಾಡಿಕೊಟ್ಟಂತಾಗುತ್ತಿದೆ. ಜನರಲ್ಲಿ ಆತ್ಮ ವಿಶ್ವಾಸ ಮೂಡಿಸಿ ನೆಮ್ಮದಿಯಾಗಿ ಜೀವನ ಮಾಡುವಂತೆ ಮಾಡಬೇಕಾದ ಸರ್ಕಾರ ಅವರಲ್ಲಿ ಭಯ ಹುಟ್ಟಿಸಿ, ದುಡಿಮೆಗೆ ಕಲ್ಲು ಹಾಕಿ ಇನ್ನಷ್ಟು ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ತಮ್ಮ ಸಿಟ್ಟುನ್ನು ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಗೆ ನಿಲ್ಲದ ಕರೋನಾ, ರಾಜಕೀಯ ಸಭೆ, ಸಮಾರಂಭಗಳಲ್ಲಿ ಇಲ್ಲದ ಕರೋನಾ, ರ್ಯಾಲಿಗಳಲ್ಲಿದ ಕರೋನಾ ಈಗ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜಕೀಯ ತಿರುವು ಪಡೆದುಕೊಂಡಿದ್ದು ಒಟ್ಟಿನಲ್ಲಿ ಜನಸಾಮಾನ್ಯರ ಬದುಕಿನಲ್ಲಿ ಹೊಡೆತ ಬೀಳುತ್ತಿರುವುದಂತೂ ಸತ್ಯ.