ಕಾಗವಾಡ: ರಾಜ್ಯ ಸರ್ಕಾರದಿಂದ ಎರಡು ತಿಂಗಳ ರೇಷನ್ ಹಂಚಿಕೆ ನಡೆದಿದ್ದು, ಕೆಲವು ಕಡೆ ರೇಷನ್ ನಲ್ಲಿಯೂ ಕನ್ನ ಹಾಕಲಾಗ್ತಿದೆ ಅನ್ನೋ ಮಾಹಿತಿ ಬಂದಿದೆ. ಹೀಗಾಗಿ ಎಲ್ಲೆಡೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗ್ತಿದೆ.
ಜಿಲ್ಲಾ ಅಧಿಕಾರಿಗಳ ಆದೇಶದ ಮೇರೆಗೆ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಎಲ್ಲ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕಳೆದ ಎರಡು ದಿನಗಳಿಂದ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಕಾಗವಾಡ, ಶಿರಗುಪ್ಪಿ, ಶೇಡಬಾಳ, ಉಗಾರ, ಕುಸನಾಳ, ಮೋಳವಾಡ, ಮಂಗಸೂಳಿ, ಐನಾಪೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿದಾರಕರಿಗೆ ರಾಜ್ಯ ಸರ್ಕಾರ ಕರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಎರಡು ತಿಂಗಳಿನ ರೇಷನ್ ನೀಡಿದ್ದು. ಜನರಿಗೆ ನ್ಯಾಯಯುತವಾಗಿ ತಲುಪಿಸುವ ಜವಾಬ್ದಾರಿ ನಿಮ್ಮದಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದರೆ ಲೈಸನ್ಸ್ ರದ್ದು ಮಾಡಲಾಗುವದು ಎಂಬ ಎಚ್ಚರಿಕೆ ನೀಡಿದರು. ಈ ವೇಳೆ ಕಂದಾಯ ನೀರಿಕ್ಷಕ ಎಸ್.ಬಿ.ಮುಲ್ಲಾ, ತಾಲೂಕಾ ಆಹಾರ ವಿಭಾಗದ ಉಪತಹಶೀಲ್ದಾರ ಮಹಾದೇವ ಬಿರಾದಾರ, ಸ್ಥಳಿಯ ಗ್ರಾಮ ಲೆಕ್ಕಾಧಿಕಾರಿಗಳು ಪಾಲ್ಗೊಂಡಿದ್ದರು.