ಮಂಡ್ಯ: ಅಗಸನಪುರ ಗ್ರಾಮದ ಗದ್ದೆಯಲ್ಲಿ ನಾಟಿ ಕೆಲಸಮಾಡುತ್ತಿದ್ದ ಆಶಾ ಎಂಬ ಗೃಹಿಣಿಯನ್ನ ಆತನ ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆ ಆರೋಪಿ ಪತಿ ನಾಗೇಗೌಡನಿಂದ ಈ ಕೃತ್ಯ ನಡೆದಿದೆ. ವರದಕ್ಷಿಣೆ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಮೂಲತಃ ಬಾಣಗಳ್ಳಿ ಗ್ರಾಮದ ಆಶಾಳನ್ನ ಅಗಸನಪುರ ಗ್ರಾಮದ ನಾಗೇಗೌಡನಿಗೆ 7 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಆರು ವರ್ಷದ ಗಂಡು ಮಗು ಇದೆ. ಬೆಂಗಳೂರಿನಲ್ಲಿ ನೌಕರಿ ಮಾಡ್ತಿದ್ದ ನಾಗೇಗೌಡ ಹಾಗೂ ಪತ್ನಿ ನಡುವೆ ಯಾವುದೇ ಜಗಳ ಕದನ ಇರ್ಲಿಲ್ಲ. ಆದ್ರೆ, ಒಂದು ವರ್ಷದ ಹಿಂದೆ ಉಂಟಾದ ಮನಸ್ತಾಪದಿಂದ ಗ್ರಾಮಕ್ಕೆ ಬಂದು ವ್ಯವಸಾಯ ಮಾಡ್ತಿದ್ದ.
ಆಶಾ ತವರು ಮನೆಗೆ ಬಂದಿದ್ಳು. ಹೀಗಾಗಿ ತಮ್ಮ ಗದ್ದೆಯಲ್ಲಿ ವ್ಯವಸಾಯ ಮಾಡಿಕೊಂಡಿದ್ಳು. ನಾಗೇಗೌಡ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನಂತೆ. ಇದೇ ಕಾರಣಕ್ಕೆ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ವೇಳೆ ಆಶಾಳನ್ನ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ.
ಈ ವಿಷಯ ತಿಳಿದು ಮಳವಳ್ಳಿ ಡಿವೈಎಸ್ಪಿ ಪೃಥ್ವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಎಂ ದೊಡ್ಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಮಲ್ಲವಯ್ಯ, ಹಲಗೂರು ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ ಈ ವೇಳೆ ಹಾಜರಿದ್ರು.