ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಡ್ಯ: ಜಿಲ್ಲೆಯ ಮೇಲುಕೋಟೆಯಲ್ಲಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ದೀಪಿಕಾ(35) ಅನ್ನೋ ಮಹಿಳೆಯ ಶವ ಪತ್ತೆಯಾಗಿದೆ. ಐತಿಹಾಸಿಕ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ದೀಪಿಕಾಳನ್ನು ಹೂತು ಹಾಕಲಾಗಿತ್ತು. ಅದು ಪತ್ತೆಯಾಗಿದ್ದು, ಶಿಕ್ಷಕಿಯ ಹಂತಕರು ಯಾರು ಅನ್ನೋ ಪ್ರಶ್ನೆ ಮೂಡಿದೆ.
ನೋಡಲು ಸುಂದರವಾಗಿರುವ ದೀಪಿಕಾ, ಕಳೆದ 10 ವರ್ಷಗಳ ಹಿಂದೆ ಪ್ರೀತಿಸಿದ ಹುಡುಗ ಲೋಕೇಶ್ ಜೊತೆಗೆ ಮದುವೆಯಾಗಿದ್ದಾಳೆ. ಈ ದಂಪತಿಗೆ ಒಂದು ಹೆಣ್ಣು ಮಗುವಿದೆ. ಪ್ರತಿ ನಿತ್ಯ ಶಾಲೆಗೆ ಬಸ್ಸಿನಲ್ಲಿ ಹೋಗುತ್ತಿದ್ದ ದೀಪಿಕಾ ಶನಿವಾರ ಸ್ಕೂಟಿ ತೆಗೆದುಕೊಂಡು ಹೋಗಿದ್ದಾಳೆ. ಆದರೆ, ವಾಪಸ್ ಮನೆಗೆ ಬಂದಿಲ್ಲ. ಪತಿ ಫೋನ್ ಮಾಡಿದರೆ ಸ್ವಿಚ್ ಆಫ್ ಬಂದಿದೆ.
ಪತ್ನಿ ಮನೆಗೆ ಬರದೆ ಇರುವುದರಿಂದ ಪತಿ ಮೇಲುಕೋಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅತ್ತ ದೀಪಿಕಾ ಪೋಷಕರು ಮಗಳ ಹುಡುಕಾಟ ನಡೆಸಿದ್ದಾರೆ. ಆಗ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ಸ್ಕೂಟಿ ಪತ್ತೆಯಾಗಿದೆ. ಅಲ್ಲಿಯೇ ಹುಡುಕಾಟ ನಡೆಸಿದಾಗ ಶವ ಹೂತಿರುವ ಸುಳಿವು ಸಿಕ್ಕಿದೆ. ಪೊಲೀಸರು, ತಹಶೀಲ್ದಾರ್ ಸಮ್ಮುಖದಲ್ಲಿ ಶವ ಹೊರ ತೆಗೆಯಲಾಗಿದೆ. ಈ ಕೃತ್ಯದ ಹಿಂದೆ ಇದೇ ಗ್ರಾಮದ 22 ವರ್ಷದ ಯುವಕನ ಬಗ್ಗೆ ಅನುಮಾನ ಬಂದಿದೆ.
ದೀಪಿಕಾಳದೊಂದಿಗೆ ಸಲುಗೆಯಿಂದ ಇದ್ದ ಹುಡುಗ ಅಕ್ಕಾ ಅಕ್ಕಾ ಎಂದು ಕರೆಯುತ್ತಿದ್ದನಂತೆ. ಇವಳು ನಾಪತ್ತೆಯಾದ ದಿನದಿಂದಲೂ ಹುಡುಗ ಸಹ ನಾಪತ್ತೆಯಾಗಿದ್ದಾನೆ. ದೀಪಿಕಾಳಿಗೆ ಕೊನೆಯ ಬಾರಿಗೆ ಕಾಲ್ ಬಂದಿದ್ದು ನಾಪತ್ತೆಯಾಗಿರುವ ಹುಡುಗನ ನಂಬರ್ ಆಗಿದೆ. ಮೇಲುಕೋಟೆ ದೇವಸ್ಥಾನದ ಹತ್ತಿರ ದೀಪಿಕಾಳೊಂದಿಗೆ ಇಬ್ಬರು ಜಗಳವಾಡುತ್ತಿರುವ ವಿಡಿಯೋವೊಂದು ಪ್ರವಾಸಿಗರು ರೆಕಾರ್ಡ್ ಮಾಡಿರುವುದು ಸಿಕ್ಕಿದೆ.
ತುಂಬಾ ಕಡಿಮೆ ನಿಮಿಷದ ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದಾರೆ. ಯಾವ ಕಾರಣಕ್ಕೆ ದೀಪಿಕಾ ಇಲ್ಲಿಗೆ ಬಂದಿದ್ದಳು? ಅವರಿಬ್ಬರ ನಡುವೆ ಜಗಳವಾಗಿದ್ಯಾಕೆ? ಕೊಲೆ ಮಾಡುವಂತದ್ದು ಏನಾಗಿತ್ತು? ಆ ಹುಡುಗನ ಪರಿಚಯವಾಗಿದ್ದು ಹೇಗೆ? ಹೀಗೆ ಹತ್ತಾರ ಪ್ರಶ್ನೆಗಳು ಮೂಡಿದ್ದು, ಪೊಲೀಸ್ ತನಿಖೆಯ ಬಳಿಕ ನಿಗೂಢ ಕೊಲೆಯ ರಹಸ್ಯ ಹೊರ ಬರಲಿದೆ.