ಪ್ರಜಾಸ್ತ್ರ ಸುದ್ದಿ
ಮಂಡ್ಯ: ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಒಳ ರೋಗಿಗಳಿಗೆ ನೀಡುವ ಊಟದ ಬಿಲ್ ವಿಚಾರದಲ್ಲಿ ಅನೇಕ ಕಡೆ ಗೋಲ್ಮಾಲ್ ನಡೆಯುತ್ತಿರುವುದು ಕಂಡು ಬರುತ್ತಿದೆ. ಇಂದು ಜಿಲ್ಲಾಧಿಕಾರಿ ಡಾ.ಕುಮಾರ್, ದಿಢೀರ್ ಎಂದು ನಾಗಮಂಗಲದ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಒಳ ರೋಗಿಗಳಿಗೆ ನೀಡುವ ಊಟದ ಬಿಲ್ ನೋಡಿ ಶಾಕ್ ಆಗಿದ್ದಾರೆ. ಒಂದು ಮುದ್ದೆ ಸಾಂಬರ್ ಗೆ 92 ರೂಪಾಯಿ, ಒಂದು ಬಾಳೆಹಣ್ಣಿಗೆ 8 ರೂಪಾಯಿ ಎಂದು ಬರೆಯಲಾಗಿದೆ. ಇದನ್ನು ನೋಡಿದ ಜಿಲ್ಲಾಧಿಕಾರಿ ಡಾ.ಕುಮಾರ್, ನಾನು ಮುದ್ದೆ ತಿನ್ನುತ್ತೇನೆ. ಇಂದಿರಾ ಕ್ಯಾಂಟೀನ್ ನಲ್ಲಿ 10 ರೂಪಾಯಿಗೆ ಸಿಗುತ್ತೆ. ರಾಗಿ ಮಿಲ್ ಮಾಡಿಸಿ ತಂದು ಮಾಡಿದರೆ 15 ರೂಪಾಯಿ ಆಗುತ್ತೆ. ಅದೇನಿದು ಇಷ್ಟೊಂದು ಬಿಲ್ ಎಂದು ಜಾಡಿಸಿದರು.
ಅಂಗನವಾಡಿಗೆ 6 ರೂಪಾಯಿಗೆ ಮೊಟ್ಟೆ ನೀಡುತ್ತೇವೆ. ನೀವು ಇಲ್ಲಿ 10 ರೂಪಾಯಿ ಮಾಡಿದ್ದೀರಿ. ಬಾಳೆಹಣ್ಣು 8 ರೂಪಾಯಿ ಎಂದಿದ್ದೀರಿ. ಇ ಟೆಂಡರ್ ಯಾಕೆ ಮಾಡಿಲ್ಲ. ಈ ಲೆಕ್ಕಾಚಾರ ತಪ್ಪಾಗಿದೆ. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಗೆ ಸೂಚಿಸಿದರು.