ಪ್ರಜಾಸ್ತ್ರ ಸುದ್ದಿ
ಸಿಂದಗಿ: ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಸೋಮಜಾಳ ಅವರಿಗೆ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಾಲೂಕಿನ ಸ್ವಗ್ರಾಮವಾದ ಸೋಮಜಾಳದಲ್ಲಿ ನಡೆದ ಅಂತಿಮ ವಿಧಿವಿಧಾನದ ವೇಳೆ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಇದೆ ವೇಳೆ ಶಿವಾನಂದ ಪಾಟೀಲ ಅವರ ಪತ್ನಿ, ಪುತ್ರ, ಪುತ್ರಿಗೆ ಸಾಂತ್ವಾನ ಹೇಳುವ ಮೂಲಕ, ನಾನು ಹಾಗೂ ನಮ್ಮ ಪಕ್ಷ ನಿಮ್ಮ ಕುಟುಂಬದ ಜೊತೆ ಇರುತ್ತೆ ಎಂದರು. ಜನಸೇವೆಯನ್ನೇ ಶಿವಸೇವೆ ಎಂದು ಅವರು ನಂಬಿದ್ದರು. ಸಮಾಜ ಸೇವೆಯಲ್ಲಿ ಸದಾ ನಿರತರಾಗಿದ್ದರು. ಅವರ ಬಗ್ಗೆ ವ್ಯಕ್ತವಾದ ಅಭಿಮಾನ ಪ್ರೀತಿ ಕಂಡು ಮೂಕನಾದೆ ಎಂದು ಹೇಳಿದ್ದಾರೆ.
ಯಾರು ಶಿವಾನಂದ ಪಾಟೀಲ?
ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದ ಶಿವಾನಂದ ಪಾಟೀಲ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಧಾರವಾಡದಲ್ಲಿ ನೆಲೆ ನಿಂತಿದ್ದರು. ತಮ್ಮದೆ ಸಂಸ್ಥೆಯ ಮೂಲಕ ಉದ್ಯಮಿ ನಡೆಸಿಕೊಂಡು ಬರುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಸಿಂದಗಿ ತಾಲೂಕಿನಾದ್ಯಂತ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದರು. ಜಾತ್ರೆ, ದೇವಸ್ಥಾನಗಳ ಅಭಿವೃದ್ಧಿ, ಕ್ರೀಡಾ ಚಟುವಟಿಕೆಗಳಿಗೆ ಸಹಾಯ ಮಾಡುತ್ತಲೇ ಬಂದರು.
ರಾಜಕೀಯದತ್ತ ಒಲವು ಹೊಂದಿದ ಶಿವಾನಂ ಪಾಟೀಲ ಸೋಮಜಾಳ ಅವರು, ಕಳೆದ ಸಿಂದಗಿಯ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಸಾಕಷ್ಟು ಕಸರತ್ತು ಮಾಡಿದರು. ಆದರೆ, ಫಲಿಸಲಿಲ್ಲ. ಮುಂದೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಮೂಲಕ ಸಂಪರ್ಕ ಸಾಧಿಸಿ ಜೆಡಿಎಸ್ ಸೇರ್ಪಡೆಯಾದರು.
ಪಂಚರತ್ನ ಯಾತ್ರೆಯ ಆರಂಭದಲ್ಲಿ ಜೆಡಿಎಸ್ ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವಾನಂದ ಪಾಟೀಲ ಸೋಮಜಾಳ ಅವರಿಗೆ ಸಿಂದಗಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಜನವರಿ 18ರಂದು ಸಿಂದಗಿಗೆ ಆಗಮಿಸಿದ ಪಂಚರತ್ನ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿ ಭರ್ಜರಿ ಸಮಾವೇಶ ನಡೆಸಿದರು. ಇಂತಹ ಮಾಜಿ ಸೈನಿಕ ಜನವರಿ 20ರ ರಾತ್ರಿ ನಿಧನ ಹೊಂದಿದರು.