ತುಮಕೂರು: ಕುಣಿಗಲ್ ಸಮೀಪದ ಬ್ಯಾಲದಕೆರೆ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಜನ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಕಾರು ಹಾಗೂ ಟವೇರಾ ನಡುವೆ ಬೆಳಗಿನ ಜಾವ 3.30ರ ಟೈಂನಲ್ಲಿ ಡಿಕ್ಕಿಯಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಬ್ಯಾಲದಕೆರೆ ಸಮೀಪ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ನಂತರ ಎದುರಿಗೆ ಬರ್ತಿದ್ದ ಟವೇರಾ ವಾಹನಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ ಟವೇರಾದಲ್ಲಿದ್ದ 9 ಜನ ಹಾಗೂ ಕಾರಿನಲ್ಲಿದ್ದ 3 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಟವೇರಾದಲ್ಲಿದ್ದ ಮಂಜುನಾಥ, ತನುಜ, ಒಂದು ವರ್ಷದ ಹೆಣ್ಣು ಮಗು, ಗೌರಮ್ಮ, ರತ್ನಮ್ಮ, ಸುಂದರರಾಜ, ರಾಜೇಂದ್ರ, ಸರಳ ಹಾಗೂ ಪ್ರಶನ್ಯಾ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಲಕ್ಷ್ಮಿಕಾಂತ, ಮಧು ಹಾಗೂ ಸಂದೀಪ ಮೃತ ದುರ್ದೈವಿಗಳು. ಇದರ ಜೊತೆಗೆ ಇನ್ನು ನಾಲ್ಕು ಜನಕ್ಕೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆ.