ಬೆಂಗಳೂರು: ಅಕ್ಟೋಬರ್ 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸಕಲ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದೆ. ಆದ್ರೆ, ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ಟೆನ್ಷನ್ ಮಾತ್ರ ಇದೆ.
ಮೈತ್ರಿ ಸರ್ಕಾರ ಪತನಗೊಳಿಸಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೊದಲ ಅಧಿವೇಶನ. ಹೀಗಾಗಿ ಬಿಜೆಪಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿಯಾಗಿ ಪ್ಲಾನ್ ಮಾಡಿಕೊಂಡಿವೆ. ಬರ ಪರಿಹಾರ, ಪ್ರವಾಹ ಪರಿಹಾರ ವಿಳಂಬ, ಡಿಕೆ ಶಿವಕುಮಾರ ವಿಚಾರವನ್ನ ಪ್ರಮುಖ ಅಸ್ತ್ರವಾಗಿ ಮಾಡಿಕೊಳ್ಳಲು ರೆಡಿಯಾಗಿವೆ.
ರಾಜ್ಯ ಸರ್ಕಾರ ಬಜೆಟ್ ಚರ್ಚೆಗೆ ಮಾತ್ರ ಅವಕಾಶ ಎಂದಿದೆ. ಆದ್ರೆ, ವಿಪಕ್ಷಗಳು ಈ ಮಾತಿಗೆ ಒಪ್ಪದೆ ಬಿಜೆಪಿ ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿವೆ. ಇದರ ಜೊತೆಗೆ ಮೂರು ದಿನಗಳ ಅಧಿವೇಶನ ಸಮಯ ಸಾಲದು. ಇನ್ನೊಂದು ವಾರ ಬೇಕು ಎಂದು ವಿರೋಧ ಪಕ್ಷಗಳು ಕೇಳಿಕೊಂಡಿವೆ. ಈ ಬಗ್ಗೆ ನಾಳೆ ಸಂಜೆ ಸಭೆ ನಡೆಯಲಿದೆ.