ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ನೆರೆಯಿಂದಾಗಿ ಹಾನಿಗೊಳಗಾದ ಜಿಲ್ಲೆಯ ಮುಧೋಳ ತಾಲೂಕಿನ ಪ್ರದೇಶಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಹಾನಿಗೊಳಗಾದ ಮನೆಗಳನ್ನ ಶಾಶ್ವತ ಸ್ಥಳಾಂತರಿಸಿ 4 ಎಕೆರೆ ಭೂಮಿ ನೀಡಲಾಗುವುದು ಎಂದು ಈ ವೇಳೆ ಹೇಳಿದ್ದಾರೆ.
ಇನ್ನು ಮುಧೋಳ ನಗರದಲ್ಲಿನ ಸ್ಮಶಾನ ಮುಳುಗಡೆಯಾಗಿದೆ. ಅದರ ಸುತ್ತಲಿನ ಪ್ರದೇಶ ಸಹ ಹಾನಿಗೊಳಗಾಗಿದ್ದು, ವಾರ್ಡ್ ನಂಬರ್ 31ರ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಇದರ ಜೊತೆಗೆ ಕುಂಬಾರ ಗೆಲ್ಲಿಯೂ ಸಹ ಹಾನಿಗೆ ಒಳಗಾಗಿದೆ. ಇದರ ಜೊತೆಗೆ ಮುಧೋಳ-ಯಾದವಾಡ ಸೇತುವೆ ಸಹ ಹಾನಿಗೆ ಒಳಗಾಗಿದ್ದು ಇಲ್ಲಿಗೂ ಭೇಟಿ ನೀಡಿದ ಡಿಸಿಎಂ, ಪ್ರವಾಹ ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಳ್ಳಲು ಸೂಚಿಸಿದ್ರು.
ಇನ್ನು ಮಿರ್ಜಿ ಗ್ರಾಮದ ಶಾಲೆಯಲ್ಲಿಯೂ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ 150 ಜನ ಸಂತ್ರಸ್ತರಿದ್ದಾರೆ. ಮುಧೋಳದಲ್ಲಿನ ಸರ್ಕಾರಿ ಶಾಲೆಯಲ್ಲಿ 40ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದು, ಹೇಳಿಕೊಳ್ಳುವ ಪರಿಸ್ಥಿತಿಯಿಲ್ಲವೆಂದು ತಿಳಿದು ಬಂದಿದೆ.
ಈ ವೇಳೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ ರಾಜೇಂದ್ರ, ಎಸ್ಪಿ ಲೋಕೇಶ ಜಗಲಸಾರ, ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ, ತಹಶೀಲ್ದಾರ್ ಸೇರಿದಂತೆ ಕೆಲ ಅಧಿಕಾರಿಗಳು ಡಿಸಿಎಂಗೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ರು.