ಸಿಂದಗಿ: ರಾಷ್ಟ್ರೀಕೃತ ಬ್ಯಾಂಕ್ ವೊಂದರ ಏಜೆಂಟ್ ರೈತರಿಗೆ ಮೋಸ ಮಾಡಿರುವ ಪ್ರಕರಣ ಪಟ್ಟಣದಲ್ಲಿ ನಡೆದಿದೆ. ಯಂಕಂಚಿ, ಯಲಗೋಡ, ಸಾಸಬಾಳ ಹಾಗೂ ಗಬಸಾವಳಗಿ ಗ್ರಾಮದ ರೈತರಿಗೆ ಲೋನ್ ಕೊಡಿಸುವ ನೆಪದಲ್ಲಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ.
ಶಿವಾನಂದ ಚಿಕ್ಕಗೂಡ ಎಂಬಾತ ಒಂದು ಎಕರೆಗೆ ಒಂದು ಲಕ್ಷ ರೂಪಾಯಿಯಂತೆ ಲೋನ್ ಮಾಡಿಸಿ ಕೊಡುವುದಾಗಿ ಹೇಳಿ ಒಬ್ಬೊಬ್ಬರಿಂದ 20, 30 ಸಾವಿರ ರೂಪಾಯಿ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗ್ತಿದೆ. ಯಂಕಂಚಿ ಗ್ರಾಮದ ಚಂದ್ರಕಾಂತ ನಾಯ್ಕೋಡಿ ಎಂಬುವರು 30 ಸಾವಿರ ಕೊಟ್ಟಿದ್ದಾರಂತೆ. ಮಲ್ಲಿಕಾರ್ಜುನ ಇಂಗಳಗಿ ಎನ್ನುವವರು 20ಸಾವಿರಕ್ಕೂ ಹೆಚ್ಚು ಹಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಒಂದು ತಿಂಗಳಲ್ಲಿ ಕೆಲಸ ಮಾಡಿಕೊಡುವುದಾಗಿ ಹೇಳಿ ಕಮಿಷನ್ ತೆಗೆದುಕೊಂಡಿದ್ದಾನೆ. ಆದ್ರೆ, ನಾಲ್ಕು ತಿಂಗಳು ಆಗುತ್ತಾ ಬಂದ್ರೂ ಯಾವುದೇ ಕೆಲಸ ಮಾಡಿಲ್ಲವಂತೆ. ಹಣ ಪಡೆದ ಶಿವಾನಂದ, ಮತ್ತೊಬ್ಬ ಏಜೆಂಟ್ ಶಕೀಲ ಲಾಳಸಂಗಿ ಎಂಬವರ ಕೈಯಲ್ಲಿ ನೀಡಿದ್ದಾನೆ ಅಂತಾ ಹೇಳಲಾಗ್ತಿದೆ. ಪಟ್ಟಣದ ವಿಜಯಪುರ ರೋಡಿನಲ್ಲಿ ಏಜೆಂಟ್ ಶಿವಾನಂದನನ್ನ ಹಿಡಿದು ಎಳೆದಾಡಲಾಯ್ತು. ಬಳಿಕ ಆತನನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅವರಿಗೆ ಒಪ್ಪಿಸಲಾಗಿದೆ.